ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಅವರು ಶನಿವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ‘ಲಾಕ್ಡೌನ್ ಕಾರ್ಯತಂತ್ರದ ಲಾಭ ಪಡೆಯದ ಏಕೈಕ ದೇಶ ಭಾರತವಾಗಿದೆ’ ಎಂದು ಟೀಕಿಸಿದ್ದಾರೆ.
ಅಲ್ಲದೆ, ಸೆಪ್ಟೆಂಬರ್ ಅಂತ್ಯದವೇಳೆಗೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 65 ಲಕ್ಷ ತಲುಪುವ ಸಾಧ್ಯತೆ ಇದೆ ಎಂದು ಅವರು ಅಂದಾಜಿಸಿದ್ದಾರೆ.
ದೇಶದಲ್ಲಿ ಶನಿವಾರ ಕೋವಿಡ್ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ ಬೆನ್ನಲ್ಲೆ ಚಿದರಂಬರಂ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
‘ಸೆ. 30ರೊಳಗೆ ಸೋಂಕಿತರ ಸಂಖ್ಯೆ 55 ಲಕ್ಷ ವಾಗುತ್ತದೆ ಎಂದು ನಾನು ಅಂದಾಜಿಸಿದ್ದೆ. ಆದರೆ ಅದು ತಪ್ಪು. ಭಾರತವು ಆ ಸಂಖ್ಯೆಯನ್ನು ಸೆ.20ರೊಳಗೆ ತಲುಪುವ ಸಾಧ್ಯತೆ ಇದ್ದು, ಈ ತಿಂಗಳಾಂತ್ಯದಲ್ಲಿ ಸೋಂಕಿತರ ಸಂಖ್ಯೆ 65 ಲಕ್ಷ ತಲುಪಲಿದೆ’ ಎಂದು ಅವರು ಅಂದಾಜು ಮಾಡಿದ್ದಾರೆ.
ಸೋಂಕು ಏರುತ್ತಿರುವುದನ್ನು ಗಮನಿಸಿದರೆ ದೇಶದಲ್ಲಿ ಲಾಕ್ಡೌನ್ ತಂತ್ರಗಳ ಲಾಭ ದೊರೆತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಆರೋಪಿಸಿದ್ದಾರೆ.
‘ನಾವು 21 ದಿನಗಳಲ್ಲಿ ಕೊರೊನಾ ವೈರಸ್ ಅನ್ನು ಸೋಲಿಸುತ್ತೇವೆ ಎಂದು ಭರವಸೆ ನೀಡಿದ್ದ ಪ್ರಧಾನಿ (ನರೇಂದ್ರ) ಮೋದಿ ಅವರು, ಈಗ ಉತ್ತರಿಸಬೇಕಿದೆ. ಈ ನಿಟ್ಟಿನಲ್ಲಿ ಇತರ ದೇಶಗಳು ಯಶಸ್ವಿಯಾದಂತೆ ತೋರಿದಾಗ ಭಾರತ ಏಕೆ ವಿಫಲವಾಯಿತು ಎಂಬುದನ್ನು ಅವರು ವಿವರಿಸಬೇಕು’ ಎಂದು ಚಿದಂಬರಂ ಆಗ್ರಹಿಸಿದ್ದಾರೆ.