ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಸಾನ್ ಆಂದೋಲನ‘ದಲ್ಲಿ ರೈತರ ಸಾವು: ಜಂಟಿ ಸದನ ಸಮಿತಿ ತನಿಖೆಗೆ ವಿಪಕ್ಷಗಳು ಆಗ್ರಹ

Last Updated 30 ಜುಲೈ 2021, 11:32 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಗಡಿ ಭಾಗಗಳಲ್ಲಿ ನಡೆಯುತ್ತಿರುವ ‘ಕಿಸಾನ್‌ ಆಂದೋಲನ’ದ ವೇಳೆ ಸಂಭವಿಸಿರುವ ರೈತರ ಸಾವುಗಳ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಲೋಕಸಭೆಯ ವಿವಿಧ ವಿರೋಧ ಪಕ್ಷಗಳು ಶುಕ್ರವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿವೆ.

ಎಡ ಪಕ್ಷಗಳು ಸೇರಿದಂತೆ, ಶಿರೋಮಣಿ ಅಕಾಲಿ ದಳ, ಎನ್‌ಸಿಪಿ, ಶಿವಸೇನಾ ಮತ್ತು ಇತರೆ ಪಕ್ಷಗಳು ಲೋಕಸಭಾಧ್ಯಕ್ಷರಿಗೆ ಪತ್ರಬರೆದಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿವೆ.

ದೆಹಲಿಯ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಕಿಸಾನ್‌ ಆಂದೋಲನದಲ್ಲಿ ಸಂಭವಿಸಿರುವ ರೈತರ ಸಾವುಗಳ ಕುರಿತು ಕೇಂದ್ರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಸತ್ತಿಗೆ ತಿಳಿಸಿದ್ದರು. ಸಚಿವರ ಹೇಳಿಕೆಯನ್ನು ವಿರೋಧಿಸಿ, ವಿರೋಧ ಪಕ್ಷಗಳು ಲೋಕಸಭಾಧ್ಯಕ್ಷರಿಗೆ ಈ ಪತ್ರ ಬರೆದಿವೆ.

‘ಕೃಷಿ ಸಚಿವರು ಹೇಳಿಕೆಯಿಂದ ಇಡೀ ದೇಶದ ಕೃಷಿಕ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ. ಸಚಿವರು ಇಂಥ ಹೇಳಿಕೆ ನೀಡುವ ಮೂಲಕ ರೈತ ಸಮುದಾಯವನ್ನೇ ಅಣಕಿಸಿದ್ದು, ಅವರು ಕೂಡಲೇ ದೇಶದ ರೈತರ ಕ್ಷಮೆ ಯಾಚಿಸಬೇಕು‘ ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.

ಕೇಂದ್ರ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ನೂರಾರು ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಸಂಘಟನೆಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT