ನವದೆಹಲಿ: ಠೇವಣಿದಾರರ ಹಿತವನ್ನು ರಕ್ಷಿಸುವ ಕ್ರಮವಾಗಿ ಸಹಕಾರ ಬ್ಯಾಂಕ್ ಗಳನ್ನೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮೇಲ್ವಿಚಾರಣಾ ವ್ಯಾಪ್ತಿಗೆ ತರುವ ಮಸೂದೆಗೆ ಸಂಸತ್ತು ಮಂಗಳವಾರ ಅಂಗೀಕಾರ ನೀಡಿದೆ.
ಜೂನ್ 26ರಂದು ಹೊರಡಿಸಲಾದ ಸುಗ್ರೀವಾಜ್ಞೆ ರೂಪದಲ್ಲಿ ಈ ‘ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2020’ ಈಗಾಗಲೇ ಜಾರಿಯಲ್ಲಿದೆ. ರಾಜ್ಯಸಭೆಯು ಧ್ವನಿಮತದಿಂದ ಮಸೂದೆಗೆ ಅನುಮೋದನೆ ನೀಡಿತು. ಲೋಕಸಭೆಯು ಸೆ. 16ರಂದು ಇದಕ್ಕೆ ಅಂಗೀಕಾರ ನೀಡಿತ್ತು.
ಸಹಕಾರ ಸಂಘಗಳ ವೃತ್ತಿಪರತೆಯನ್ನು ಬಲಪಡಿಸುವುದು, ಬಂಡವಾಳ ಕ್ರೋಡೀಕರಣಕ್ಕೆ ಅವಕಾಶ, ಆಡಳಿತ ವ್ಯವಸ್ಥೆ ಸುಧಾರಣೆ, ಆರ್.ಬಿ.ಐ ಮೇಲ್ವಿಚಾರಣೆಯ ವ್ಯಾಪ್ತಿಗೆ ತರುವುದು ಇದರ ಉದ್ದೇಶಗಳಾಗಿವೆ.
ರಾಜ್ಯಸಭೆಯಲ್ಲಿ ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಠೇವಣಿದಾರರ ಹಿತವನ್ನು ಸಂಪೂರ್ಣವಾಗಿ ರಕ್ಷಿಸುವುದು ಈ ಮಸೂದೆಯ ಉದ್ದೇಶ ಎಂದು ತಿಳಿಸಿದರು.