ಶ್ರೀನಗರ: ಕೆಲಸ ಮಾಡಿದ್ದಕ್ಕಾಗಿ ನನ್ನನ್ನು ಪೊಲೀಸರು ಬಂಧಿಸುವುದಾದರೆ ಬಂಧಿಸಲಿ ಬಿಡಿ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಪಕ್ಷದ ಮುಖ್ಯಸ್ಥೆಯಾಗಿ ಸೋಮವಾರ ಪುನರಾಯ್ಕೆಯಾದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಶ್ಮೀರದ ಐಜಿಪಿಗೆ ಅವರ ಕೆಲಸ ಮಾಡಲು ಬಿಡಿ. ನಾನು ಈಗಿನಂತೆಯೇ ನನ್ನ ಕೆಲಸ ಮುಂದುವರಿಸುತ್ತೇನೆ. ಅದಕ್ಕಾಗಿ ಪೊಲೀಸರು ನನ್ನನ್ನು ಬಂಧಿಸಲು ಬಯಸಿದರೆ ಅದಕ್ಕೆ ಅವಕಾಶ ಕೊಡಿ’ ಎಂದು ಹೇಳಿದ್ದಾರೆ.
‘ಕೆಲವು ರಾಜಕಾರಣಿಗಳು ಸುಳ್ಳು ವದಂತಿಗಳನ್ನು ಹರಡುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ. ಅಗತ್ಯವಾದಲ್ಲಿ ಅಂತಹ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮುಫ್ತಿ, ‘ನನ್ನ ತಂದೆ ಮುಫ್ತಿ ಮೊಹಮ್ಮದ್ ಸಯ್ಯದ್ ಅವರ ಧ್ಯೇಯ ಮತ್ತು ದೃಷ್ಟಿಕೋನವನ್ನು ಮುಂದುವರಿಸಲು ಶ್ರಮಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘ಕಾಶ್ಮೀರದ ಜನರ ನೋವುಗಳನ್ನು ಕೊನೆಗೊಳಿಸಲು ಬಯಸುತ್ತೇನೆ. ಕಾಶ್ಮೀರವನ್ನು ಭಾರತ ಹಾಗೂ ಪಾಕಿಸ್ತಾನದ ನಡುವಣ ಯುದ್ಧದ ಕೇಂದ್ರವಾಗಲು ಬಿಡುವುದಿಲ್ಲ. ಬದಲಿಗೆ ಶಾಂತಿಯ ಸೇತುವಾಗಿ ಮಾಡಲು ಬಯಸುತ್ತೇನೆ’ ಎಂದು ಮುಫ್ತಿ ಹೇಳಿದ್ದಾರೆ.
ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆಯೇ ಪರಿಹಾರ ಎಂದೂ ಅವರು ಹೇಳಿದ್ದಾರೆ.