ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ವಸ್ತುಗಳು ಕೈಗೆಟಕುವಂತಿರಬೇಕು ಎಂಬುದು ಜನರ ಬಯಕೆ: ದತ್ತಾತ್ರೇಯ ಹೊಸಬಾಳೆ

ಆರ್‌ಎಸ್‌ಎಸ್‌ ‍ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯ
Last Updated 24 ಜುಲೈ 2022, 11:08 IST
ಅಕ್ಷರ ಗಾತ್ರ

ನವದೆಹಲಿ: ‘ಆಹಾರ, ಬಟ್ಟೆ ಹಾಗೂ ಆಶ್ರಯ ತಾಣ ಮನುಷ್ಯರ ಪ್ರಾಥಮಿಕ ಅಗತ್ಯಗಳು. ಇವು ಕೈಗೆಟಕುವಂತಿರಬೇಕು. ಇದು ಜನರ ಬಯಕೆ ಕೂಡ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌)‍ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.

ಭಾರತೀಯ ಕಿಸಾನ್‌ ಸಂಘವು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌) ಮತ್ತು ಭಾರತೀಯ ಆಗ್ರೋ ಎಕನಾಮಿಕ್‌ ರಿಸರ್ಚ್‌ ಸೆಂಟರ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೃಷಿ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಅಮುಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಸ್‌.ಸೋಧಿ ಅವರು ‘ಹಣದುಬ್ಬರ ಹಾಗೂ ಆಹಾರ ಪದಾರ್ಥದ ದರಗಳ ನಡುವಣ ಸಂಯೋಜನೆ’ ಕುರಿತು ವಿಷಯ ಮಂಡಿಸಿದರು.

ಇದನ್ನು ಉಲ್ಲೇಖಿಸಿ ಮಾತನಾಡಿದ ಹೊಸಬಾಳೆ, ‘ಜನರು ಕೈಗಾರಿಕಾ ಉತ್ಪನ್ನಗಳನ್ನುಹೆಚ್ಚು ಬೆಲೆಗೆ ಖರೀದಿಸಲು ಸಿದ್ಧರಿದ್ದಾರೆಯೇ ಹೊರತು ಆಹಾರ ಪದಾರ್ಥಗಳನ್ನಲ್ಲ. ಅದು ಸಹಜ ಕೂಡ. ಏಕೆಂದರೆ ಆಹಾರ, ಬಟ್ಟೆ ಹಾಗೂ ವಸತಿ ಪ್ರಾಥಮಿಕ ಅಗತ್ಯಗಳು’ ಎಂದರು.

ಕೃಷಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ‘ಹಿಂದಿನ 75 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಇದು ಹೆಮ್ಮೆಯ ವಿಷಯ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬಿಯಾಗಿರುವ ಜೊತೆಗೆ ಇತರ ರಾಷ್ಟ್ರಗಳಿಗೆ ಅವುಗಳನ್ನು ರಫ್ತು ಮಾಡುವಷ್ಟರಮಟ್ಟಿಗೆ ಸಶಕ್ತವಾಗಿದೆ. ಇದರ ಶ್ರೇಯ ಈವರೆಗಿನ ಎಲ್ಲಾ ಸರ್ಕಾರಗಳು, ವಿಜ್ಞಾನಿಗಳು ಹಾಗೂ ರೈತರಿಗೆ ಸಲ್ಲಬೇಕು’ ಎಂದು ಹೇಳಿದರು.

‘ಕೃಷಿ ಕ್ಷೇತ್ರದೆಡೆ ಜನರನ್ನು ಸೆಳೆಯುವ ದಿಸೆಯಲ್ಲಿ ಚಳವಳಿಯೊಂದು ನಡೆಯಬೇಕು. ರೈತರ ಆದಾಯಕ್ಕೆ ಯಾವುದೇ ಖಾತರಿ ಇಲ್ಲ.ಸರ್ಕಾರದ ಸಣ್ಣ ಕಾರ್ಯಕ್ರಮಗಳಿಗೆ ವಕೀಲರು, ಶಾಲೆ–ಕಾಲೇಜುಗಳ ಪ್ರಾಂಶುಪಾಲರನ್ನು ಅತಿಥಿಗಳನ್ನಾಗಿ ಆಹ್ವಾನಿಸುವುದನ್ನು ನೋಡಿದ್ದೇನೆ. ಆದರೆ ಕೃಷಿಕರಿಗೆ ಅಲ್ಲಿ ಆಹ್ವಾನ ಇರುವುದಿಲ್ಲ. ಗ್ರಾಮೀಣ ಕೈಗಾರಿಕೀಕರಣದತ್ತ ಹೆಚ್ಚು ಗಮನಹರಿಸಬೇಕು. ಹಳ್ಳಿಗಾಡಿನ ಜನರು ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಇದು ಸಹಕಾರಿ. ಎನ್‌ಸಿಆರ್‌ಐನಂತಹ ಸಂಸ್ಥೆಗಳನ್ನು ಬಲಪಡಿಸುವುದೂ ಬಹಳ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT