ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಕಾರಣ: ಕೇಂದ್ರ ಗೃಹ ಸಚಿವಾಲಯ

Last Updated 6 ಜನವರಿ 2022, 4:11 IST
ಅಕ್ಷರ ಗಾತ್ರ

ನವದೆಹಲಿ: ‘ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ತೆರಳಿದ್ದ ವೇಳೆ ಭದ್ರತಾ ಲೋಪವಾಗಿದ್ದಕ್ಕೆ ಪಂಜಾಬ್ ಪೊಲೀಸರು ಕಾರಣ’ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ.

‘ಪ್ರತಿಭಟನಾಕಾರರ ಬಗ್ಗೆ ಪಂಜಾಬ್ ಪೊಲೀಸರಿಗೆ ಗುಪ್ತಚರ ಮಾಹಿತಿ ಇದ್ದರೂ ಎಸ್‌ಪಿಜಿಯ ಬ್ಲೂ ಬುಕ್ ಮಾರ್ಗದರ್ಶನಗಳನ್ನು ಅನುಸರಿಸಲಿಲ್ಲ. ಪ್ರಧಾನಿಯವರಿಗೆ ಪರ್ಯಾಯ ಮಾರ್ಗವನ್ನು ಹುಡಕಲಿಲ್ಲ’ ಎಂದು ಅಧಿಕಾರಿಗಳು ಆರೋಪಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

‘ನಮ್ಮ ಗುಪ್ತಚರ ಅಧಿಕಾರಿಗಳು ಪಂಜಾಬ್ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದರು. ಪ್ರತಿಭಟನಾಕಾರರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಪ್ರಧಾನಿ ಭೇಟಿ ವೇಳೆ ಭದ್ರತಾ ಲೋಪ ಆಗುವುದಿಲ್ಲವೆಂದು ಪಂಜಾಬ್ ಪೊಲೀಸರು ನಮಗೆ ಭರವಸೆ ಕೊಟ್ಟಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪಂಜಾಬ್ ಪೊಲೀಸರು ಕೈಗೊಂಡಿದ್ದ ಭದ್ರತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬುಧವಾರ ಜನವರಿ 5ರಂದು ಪಂಜಾಬ್‌ನ ಫಿರೋಜ್‌ಪುರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಿಗದಿಯಾಗಿತ್ತು.

ಇನ್ನೊಂದೆಡೆ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್‌ ಚನ್ನಿ,‘ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಅಡ್ಡಿಯಾಗಿದ್ದಕ್ಕೆ ವಿಷಾದವಿದೆ. ಆದರೆ, ಇಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನಿ ಅವರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ’ ಎಂದಿದ್ದಾರೆ.

‘ಪ್ರಧಾನಿ ಅವರ ರ‍್ಯಾಲಿಗೆ ಭದ್ರತೆ ಕೇಳಲಾಗಿತ್ತು. ಅದಕ್ಕೆ ಅಗತ್ಯವಿದ್ದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಪ್ರಧಾನಿ ಅವರು ರಸ್ತೆ ಮಾರ್ಗದಲ್ಲಿ ಹುಸೈನಿವಾಲಾಕ್ಕೆ ಹೋಗುವ ಕಾರ್ಯಕ್ರಮ ಮೂಲಪಟ್ಟಿಯಲ್ಲಿ ಇರಲಿಲ್ಲ. ಆದರೆ, ಕೊನೆಯ ಕ್ಷಣದಲ್ಲಿ ಪ್ರಧಾನಿ ರಸ್ತೆ ಮಾರ್ಗದಲ್ಲಿ ಹೊರಟರು’ ಎಂದಿದ್ದಾರೆ.

‘ಪ್ರತಿಭಟನೆಯ ಕಾರಣ ರಸ್ತೆ ಬಂದ್ ಆಗಿತ್ತು. ಪ್ರತಿಭಟನಾಕಾರರನ್ನು ತೆರವು ಮಾಡಲು 20 ನಿಮಿಷವಾದರೂ ಬೇಕಿತ್ತು. ಪ್ರಧಾನಿ ಅವರಿಗೆ ಬದಲಿ ಮಾರ್ಗವನ್ನೂ ಸೂಚಿಸಿದೆವು. ಆದರೆ ಅವರು ವಾಪಸ್ಸಾಗಲು ನಿರ್ಧರಿಸಿದರು’ ಎಂದು ಚನ್ನಿ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT