ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಗುಲಾಂ ನಬಿ ಆಜಾದ್‌ ಕುರಿತು ಮಾತನಾಡುವಾಗ ಗದ್ಗದಿತರಾದ ಪ್ರಧಾನಿ ಮೋದಿ

Last Updated 9 ಫೆಬ್ರುವರಿ 2021, 12:01 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹಾಗೂ ನಿವೃತ್ತರಾಗುತ್ತಿರುವ ರಾಜ್ಯಸಭೆ ಸದಸ್ಯರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು.

ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ಶುಭ ವಿದಾಯ ಘೋಷಿಸುವ ವೇಳೆ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ಅವರು ‘ಗುಲಾಂ ನಬಿ ಜೀ (ಪ್ರತಿಪಕ್ಷ ನಾಯಕ) ಅವರ ಸ್ಥಾನವನ್ನು ತುಂಬುವುದು ಕಷ್ಟವಿದೆ. ಅವರಂತೆಯೇ ಕೆಲಸ ಮಾಡುವುದು ಸುಲಭವಲ್ಲ. ಅವರು ತಮ್ಮ ಪಕ್ಷದ ಬಗ್ಗೆ ಮಾತ್ರ ಕಾಳಜಿ ಇದ್ದವರಲ್ಲ. ಇಡೀ ದೇಶ ಹಾಗೂ ಸದನದ ಬಗ್ಗೆ ಕಾಳಜಿಯುಳ್ಳವರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮಾತುಗಳನ್ನಾಡುವ ಮಧ್ಯೆ ಮೋದಿ ಅವರು ಹಲವು ಬಾರಿ ಗದ್ಗದಿತರಾದರು. ನೀರು ಕುಡಿದು ಸುಧಾರಿಸಿಕೊಂಡು ಮತ್ತೆ ಮಾತು ಆರಂಭಿಸಿದ ಅವರು ಒಂದು ಹಂತದಲ್ಲಿ ಮಾತು ಹೊರಡದೆ ಭಾವುಕರಾದರು. ಮತ್ತೊಮ್ಮೆ ಸುಧಾರಿಸಿಕೊಂಡು ಮಾತು ಮುಂದುವರಿಸಿದ ಅವರು, ಗುಲಾಂ ನಬಿ ಆಜಾದ್ ಅವರ ಸಾಧನೆಗಳನ್ನು ನೆನಪಿಸಿಕೊಂಡರು.

‘ಹುದ್ದೆಗಳು ಬರುತ್ತವೆ ಹೋಗುತ್ತವೆ. ಉನ್ನತ ಅಧಿಕಾರ ಸಿಗುತ್ತವೆ, ಹೋಗುತ್ತವೆ. ಅಧಿಕಾರ ಬಂದಾಗ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಗುಲಾಂ ನಬಿ ಆಜಾದ್ ಜೀ ಅವರನ್ನು ನೋಡಿ ಕಲಿಯಬೇಕಿದೆ. ಅವರನ್ನೊಬ್ಬ ನಿಜವಾದ ಸ್ನೇಹಿತನನ್ನಾಗಿ ನಾನು ಪರಿಗಣಿಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನೂ ಮೋದಿ ನೆನಪಿಸಿಕೊಂಡಿದ್ದಾರೆ.

‘ಭಯೋತ್ಪಾದಕ ದಾಳಿ ವೇಳೆ ಗುಜರಾತ್‌ನ ಜನ ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದಾಗ ಅವರ ರಕ್ಷಣೆಗೆ ಪ್ರಣವ್ ಮುಖರ್ಜಿ ಹಾಗೂ ಗುಲಾಂ ನಬಿ ಆಜಾದ್ ಅವರು ನೆರವಾಗಿದ್ದನ್ನು ಮರೆಯಲಾರೆ. ಆಜಾದ್ ಅವರು ನಿರಂತರವಾಗಿ ಗಮನಹರಿಸಿದರು. ತಮ್ಮದೇ ಕುಟುಂಬದವರು ಅಲ್ಲಿ ಸಿಲುಕಿದ್ದಾರೆ ಎಂಬಂತೆ ಕಾಳಜಿ ವಹಿಸಿದ್ದರು’ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT