ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣ: ಕೇರಳದ ಸಾಧನೆಯನ್ನು ಶ್ಲಾಘಿಸಿದ ರಾಷ್ಟ್ರಪತಿ ಮುರ್ಮು

Last Updated 17 ಮಾರ್ಚ್ 2023, 14:30 IST
ಅಕ್ಷರ ಗಾತ್ರ

ತಿರುವನಂತಪುರ: ರಾಷ್ಟ್ರಪತಿ ಸ್ಥಾನಕ್ಕೇರಿದ ಬಳಿಕ ಇದೇ ಮೊದಲ ಬಾರಿಗೆ ಕೇರಳಕ್ಕೆ ಶುಕ್ರವಾರ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಮಹಿಳೆಯರ ಸಬಲೀಕರಣದಲ್ಲಿ ಕೇರಳದ ಸಾಧನೆಯನ್ನು ಶ್ಲಾಘಿಸಿದರು.

‘ಬಡತನ ನಿವಾರಣೆಯಲ್ಲೂ ಸಬಲೀಕರಣ ಸಾಧಿಸಿರುವ ರಾಜ್ಯವು, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಉತ್ತಮ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರದಲ್ಲಿ ಶುಕ್ರವಾರ ‘ಕುಟುಂಬಶ್ರೀ’ ಯೋಜನೆಯ ಬೆಳ್ಳಿಹಬ್ಬದ ಆಚರಣೆ ಕಾರ್ಯಕ್ರಮ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ರೂಪಿಸಿರುವ ‘ಉನ್ನತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೇರಳದ ಲಿಂಗಾನು‌ಪಾತವು ದೇಶದಲ್ಲೇ ಅತ್ಯುತ್ತಮವಾಗಿದೆ ಮತ್ತು ಮಹಿಳಾ ಸಾಕ್ಷರತೆ ಸೇರಿದಂತೆ ಒಟ್ಟಾರೆ ಅತ್ಯಧಿಕ ಸಾಕ್ಷರತೆಯನ್ನು ಹೊಂದಿರುವ ರಾಜ್ಯವಾಗಿದೆ’ ಎಂದೂ ಹೇಳಿದ್ದಾರೆ.

‘ತಾಯಿಯ ಆರೋಗ್ಯವನ್ನು ಉತ್ತೇಜಿಸುವ ಮತ್ತು ಶಿಶು ಮರಣವನ್ನು ತಡೆಗಟ್ಟುವ ವಿಚಾರದಲ್ಲಿ ಕೇರಳದ ಸಾಧನೆಯು ದೇಶದಲ್ಲೇ ಅತ್ಯುತ್ತಮವಾಗಿದೆ. ಯಾವುದೇ ಸಮಾಜದಲ್ಲಿ ಮಹಿಳೆಯರಿಗೆ ಪ್ರಮುಖ ಪಾತ್ರಗಳನ್ನು ನೀಡಿದಾಗ ಅದು ಆ ಸಮಾಜದ ಒಟ್ಟಾರೆ ಸುಧಾರಣೆಗೆ ಕಾರಣವಾಗುತ್ತದೆ ಎಂದು ನಾನು ನಂಬುತ್ತೇನೆ. ಕೇರಳದಲ್ಲಿ ಮಹಿಳೆಯರು ಹೆಚ್ಚು ವಿದ್ಯಾವಂತರಾಗಿದ್ದಾರೆ ಮತ್ತು ಸಬಲರಾಗಿದ್ದಾರೆ. ಅಷ್ಟೇ ಅಲ್ಲ, ರಾಜ್ಯವು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲೂ ಉತ್ತಮ ಸಾಧನೆಯನ್ನು ಪ್ರತಿಬಿಂಬಿಸಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಂಗಾವಲು ಪಡೆ ವಾಹನ ನಿಲ್ಲಿಸಿ ಮಕ್ಕಳಿಗೆ ಚಾಕೊಲೇಟ್ ನೀಡಿದ ಮುರ್ಮು!

ಕೊಲ್ಲಂ: ತಮ್ಮನ್ನು ಸ್ವಾಗತಿಸಲು ಕೊಲ್ಲಂನ ರಸ್ತೆಯ ಬದಿಯಲ್ಲಿ ನಿಂತಿದ್ದ ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಬೆಂಗಾವಲು ಪಡೆಯ ವಾಹನಗಳನ್ನು ನಿಲ್ಲಿಸಿ ಚಾಕೊಲೇಟ್ ವಿತರಿಸಿದರು. ‌

ತಮ್ಮ ಅಧಿಕೃತ ವಾಹನದಿಂದ ಇಳಿದು ರಾಷ್ಟ್ರಪತಿ ಅವರೇ ಖುದ್ದಾಗಿ ತಮ್ಮ ಬಳಿ ಬಂದು ಚಾಕೊಲೇಟ್ ವಿತರಿಸಿದ್ದನ್ನು ಕಂಡ ಮಕ್ಕಳು ಸಂತಸಪಟ್ಟರು. ಮುರ್ಮು ಅವರು ಕಾರಿನ ಬಳಿಗೆ ವಾಪಸ್ ಮರಳಿದಾಗ ಮಕ್ಕಳು ಅವರತ್ತ ಕೈಬೀಸಿ ಒಕ್ಕೊರಲಿನಿಂದ ಕೂಗಿ ‘ಧನ್ಯವಾದ’ ಎಂದು ಹೇಳಿದರು.

ಅಮೃತಾನಂದಮಯಿ ಆಶ್ರಮಕ್ಕೆ ಭೇಟಿ

ಅಮೃತಪುರಿಯಲ್ಲಿರುವ ಮಾತಾ ಅಮೃತಾನಂದಮಯಿ ಅವರ ಆಶ್ರಮಕ್ಕೂ ದ್ರೌಪದಿ ಮುರ್ಮು ಅವರು ಭೇಟಿ ನೀಡಿದರು.

ಅಮೃತಾನಂದಮಯಿ ಅವರೊಂದಿಗೆ ಅರ್ಧ ಗಂಟೆ ಕಾಲ ಮುರ್ಮು ಅವರು ಸಭೆ ನಡೆಸಿದರು.

ಆಶ್ರಮದ ಸನ್ಯಾಸಿನಿಯರು ಮುರ್ಮು ಅವರ ಹಣೆಗೆ ತಿಲಕವಿಟ್ಟು, ಹಾರ ಹಾಕಿ, ಶಾಲು ಹೊದಿಸಿ ಭಾರತೀಯ ಸಂಪ್ರದಾಯದೊಂದಿಗೆ ಸ್ವಾಗತಿಸಿದರು ಎಂದು ಆಶ್ರಮದ ಪ್ರಕಟಣೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT