ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಯಶವಂತ ಸಿನ್ಹಾ ಕಣಕ್ಕೆ?

ಸ್ಪರ್ಧೆಗೆ ನಿರಾಕರಿಸಿ ಗೋಪಾಲಕೃಷ್ಣ ಗಾಂಧಿ ಹೇಳಿಕೆ
Last Updated 20 ಜೂನ್ 2022, 19:08 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಮಹಾತ್ಮ ಗಾಂಧಿ ಅವರ ಮೊಮ್ಮಗ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಸೋಮವಾರ ನಿರಾಕರಿಸಿದ್ದಾರೆ. ಹಾಗಾಗಿ, ವಿರೋಧ ಪಕ್ಷಗಳು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರನ್ನು ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿವೆ.

‘ಬಿಜೆಪಿಯ ಮಾಜಿ ನಾಯಕ ಸಿನ್ಹಾ ಅವರು ಕಳೆದ ವರ್ಷ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ. ಸಿನ್ಹಾ ಅವರನ್ನು ವಿರೋಧ ಪಕ್ಷಗಳ ಕೆಲವು ನಾಯಕರು ಪ್ರಸ್ತಾಪಿಸಿದ್ದು, ಬೆಂಬಲವನ್ನೂ ವ್ಯಕ್ತಪಡಿಸಿವೆ’ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಸಿನ್ಹಾ ಅವರ ಹೆಸರನ್ನು ಸೂಚಿಸುವ ಫೋನ್ ಕರೆಗಳು ಬಂದಿವೆ. ಮಮತಾ ಕೂಡಾ ಸಿನ್ಹಾ ಅವರನ್ನು ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಆಸಕ್ತಿ ತೋರಿದ್ದಾರೆ’ ಎಂದೂ ಅವರು ಹೇಳಿದ್ದಾರೆ. ವಿರೋಧ ಪಕ್ಷಗಳು ಗೋಪಾಲಕೃಷ್ಣ ಅವರ ಮನವೊಲಿಸುವ ಸಾಧ್ಯತೆಯಿದ್ದು, ಆದರೆ, ಅವರು ಸ್ಪರ್ಧೆಗೆ ಒಪ್ಪಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದೆ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ರಸ್ತಾವವನ್ನು ಮಹಾರಾಷ್ಟ್ರದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ನಿರಾಕರಿಸಿದ್ದರು.

ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಂಸತ್ ಸೌಧದಲ್ಲಿ ಮಂಗಳವಾರ ನಡೆಯಲಿರುವ ಸಭೆಗೆ ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿರುವಾಗ ಗೋಪಾಲಕೃಷ್ಣ ಅವರು ತಮ್ಮ 245 ಪದಗಳ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಇದರಿಂದ ವಿರೋಧಪಕ್ಷಗಳ ನಾಯಕರಿಗೆ ನಿರಾಸೆಯುಂಟಾಯಿತು. ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಚುನಾವಣೆಯನ್ನು ‘ಗೋಡ್ಸೆ v/s ಗಾಂಧಿ’ ಸಿದ್ಧಾಂತದ ಸ್ಪರ್ಧೆಯನ್ನಾಗಿಸಲು ವಿರೋಧಪಕ್ಷಗಳು ಬಯಸಿದ್ದವು.


‘ಪ್ರತಿಪಕ್ಷಗಳ ಹಲವು ಗೌರವಾನ್ವಿತ ನಾಯಕರು ರಾಷ್ಟ್ರಪತಿ ಅತ್ಯುನ್ನತ ಹುದ್ದೆಗೆ ಮುಂಬರುವ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನಾಗಿ ನನ್ನ ಹೆಸರನ್ನು ಪ್ರಸ್ತಾಪಿಸಿವೆ. ಈ ಗೌರವಕ್ಕಾಗಿ ನಾನು ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ, ಈ ವಿಷಯವನ್ನು ಆಳವಾಗಿ ಪರಿಗಣಿಸಿದಾಗ ವಿರೋಧಪಕ್ಷದ ಅಭ್ಯರ್ಥಿಯು ಪ್ರತಿಪಕ್ಷಗಳ ಏಕತೆಯ ಜೊತೆಗೆ ರಾಷ್ಟ್ರೀಯ ಸಹಮತವನ್ನೂ ಸೃಷ್ಟಿಸುವವರಾಗಿರಬೇಕು ಎಂಬುದನ್ನು ಮನಗಂಡಿದ್ದೇನೆ. ಇದನ್ನು ನನಗಿಂತ ಉತ್ತಮವಾಗಿ ಮಾಡುವ ಇತರರು ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ಅಂಥ ವ್ಯಕ್ತಿಗೆ ಅವಕಾಶವನ್ನು ನೀಡಬೇಕೆಂದು ನಾನು ನಾಯಕರಲ್ಲಿ ವಿನಂತಿಸುತ್ತೇನೆ’ ಎಂದು ಗೋ‍ಪಾಲಕೃಷ್ಣ ಗಾಂಧಿ ತ‌ಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ದೇಶದ ಕೊನೆಯ ಗವರ್ವನರ್ ಜನರಲ್ ಆಗಿದ್ದ ರಾಜಾಜಿ ಅವರ ಬಳಿಕ, ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ರಾಜೇಂದ್ರ ಪ್ರಸಾದ್ ಅವರಂಥ ರಾಷ್ಟ್ರಪತಿಯನ್ನು ದೇಶವು ಪಡೆಯಲಿ’ ಎಂದೂ ಅವರು ಹಾರೈಸಿದ್ದಾರೆ.

2017ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಗೋಪಾಲಕೃಷ್ಣ ಗಾಂಧಿ ಅವರು ವಿರೋಧ ಪಕ್ಷದ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿದ್ದರು. ಆದರೆ, ಎನ್‌ಡಿಎಯು ಪರಿಶಿಷ್ಟ ಜಾತಿಗೆ ಸೇರಿದ ರಾಮನಾಥ ಕೋವಿಂದ್ ಅವರ ಹೆಸರನ್ನು ಘೋಷಿಸುತ್ತಿದ್ದಂತೆಯೇ, ವಿರೋಧಪಕ್ಷಗಳು ತಮ್ಮ ಕಾರ್ಯತಂತ್ರವನ್ನು ಮರುಪರಿಶೀಲಿಸಿ, ಬಾಬು ಜಗಜೀವನ್ ರಾಮ್ ಅವರ ಪುತ್ರಿ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿತ್ತು.

ಬಳಿಕ ಗೋಪಾಲಕೃಷ್ಣ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ವಿರೋಧಪಕ್ಷಗಳು ನಿಲ್ಲಿಸಿದವು. ಆದರೆ, ಎಂ. ವೆಂಕಯ್ಯನಾಯ್ಡು ಅವರ ವಿರುದ್ಧ ಗಾಂಧಿ ಅವರು ಸೋಲು ಅನುಭವಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT