ನವದೆಹಲಿ: ಭಾರತದ 74ನೇ ಸ್ವಾತಂತ್ರ್ಯೋತ್ಸವ ದಿನದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್ ದೇಶವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು. 'ಸ್ವತಂತ್ರ ರಾಷ್ಟ್ರದ ಪ್ರಜೆಗಳಾಗಿರುವುದಕ್ಕೆ ವಿಶೇಷವಾಗಿ ಭಾರತದ ಯುವಕರು ಹೆಮ್ಮೆ ಪಡಬೇಕು' ಎಂದರು.
ಕೋವಿಡ್–19 ದೇಶದ ಎಲ್ಲ ಚಟುವಟಿಕೆಗಳು ಹಾಗೂ ಸ್ವಾತಂತ್ರ ದಿನಾಚರಣೆಯಗೂ ಅಡ್ಡಿಪಡಿಸಿದೆ ಎಂದರು.
ಸ್ವತಂತ್ರ ಹೋರಾಟದಲ್ಲಿ ಮಹಾತ್ಮ ಗಾಂಧಿ ಅವರು ಹಾದಿ ತೋರುವ ಬೆಳಕಾಗಿದ್ದು ನಮ್ಮ ಅದೃಷ್ಟ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಅನ್ವೇಷಣೆಯೇ ನಮ್ಮ ಗಣತಂತ್ರದ ಮಂತ್ರ. ಯುವ ಪೀಳಿಕೆ ಗಾಂಧೀಜಿ ಅವರನ್ನು ಮತ್ತೆ ಕಂಡುಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
'ಕೊರೊನಾ ವೈರಸ್ ಎದುರಿನ ಹೋರಾಟದಲ್ಲಿ ಮುಂದಾಳುಗಾಳದ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ದೇಶ ಋಣಿಯಾಗಿದೆ. ತಮ್ಮ ಕರ್ತವ್ಯಗಳ ಮಿತಿಗಳನ್ನು ಮೀರಿ ಈ ಎಲ್ಲ ಯೋಧರು ಶ್ರಮಿಸಿದ್ದಾರೆ, ಜೀವಗಳನ್ನು ರಕ್ಷಿಸಿದ್ದಾರೆ ಹಾಗೂ ಅಗತ್ಯ ಸೇವೆಗಳು ದೊರೆಯುವಂತೆ ನೋಡಿಕೊಂಡಿದ್ದಾರೆ' ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಂಸಿಸಿದರು.
ಜೂನ್ನಲ್ಲಿ ಲಡಾಕ್ನ ಗಡಿ ವಾಸ್ತವ ರೇಖೆಯಲ್ಲಿ ಚೀನಾ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಸಾವಿಗೀಡಾದ ಭಾರತದ 20 ಯೋಧರಿಗೆ ರಾಷ್ಟ್ರಪತಿ ನಮನ ಸಲ್ಲಿಸಿದರು. ಚೀನಾದ ಹೆಸರು ಹೇಳದೆಯೇ 'ನಮ್ಮ ನೆರೆಯಲ್ಲಿ ಯಾರೋ ಒಬ್ಬರು ಗಡಿ ವಿಸ್ತರಿಸಿಕೊಳ್ಳುವ ದುಸ್ಸಾಹಸ ನಡೆಸಿದರು. ಜಗತ್ತು ಒಟ್ಟಾಗಿ ಮಾನವೀಯತೆಗೆ ಎದುರಾಗಿರುವ ಸವಾಲುಗಳ ವಿರುದ್ಧ ಹೋರಾಡಬೇಕಿದೆ.' ಎಂದರು.
ಹುತಾತ್ಮ ಯೋಧರನ್ನು ಭಾರತ ಮಾತೆಯ ಯೋಗ್ಯ ಸುಪುತ್ರರು ಎಂದು ಸಂಬೋಧಿಸಿ, 'ಹೋರಾಟದಲ್ಲಿ ಅವರ ಧೈರ್ಯವು ಶಾಂತಿಯಲ್ಲಿ ನಮ್ಮ ನಂಬಿಕೆ ಹಾಗೂ ಆಕ್ರಮಣಶೀಲತೆಗೆ ತಕ್ಕ ಉತ್ತರವನ್ನೂ ನೀಡಲು ಸಮರ್ಥರು ಎಂಬುದನ್ನು ತೋರಿದೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.