ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಇಲ್ಲದೆ ಹೊರ ಬರುವವರು ತಮ್ಮ ಕುಟುಂಬದ ಬಗ್ಗೆ ಯೋಚಿಸಲಿ: ಪ್ರಧಾನಿ ಮೋದಿ

Last Updated 20 ಅಕ್ಟೋಬರ್ 2020, 13:19 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ 75 ಲಕ್ಷ ದಾಟಿದೆ ಹಾಗೂ ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ಸಮಯದಲ್ಲಿ ದೇಶದ ಜನರು ಬಹಳ ಎಚ್ಚರಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ 6 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.

'ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟ ನಡೆಯುತ್ತಿದ್ದು, ನಮ್ಮ ಜವಾಬ್ದಾರಿ ನಿರ್ವಹಿಸಲು ಮತ್ತು ಜೀವನಕ್ಕೆ ಹೊಸ ಗತಿ ಕೊಡಲು ಪ್ರತಿದಿನ ಮನೆಯಿಂದ ಹೊರಗೆ ಬರಬೇಕಿದೆ. ನಾವು ಮನೆಯಿಂದ ಹೊರಗೆ ಬರುತ್ತಲೇ ಇದ್ದೇವೆ. ದೇಶದಲ್ಲಿ ಲಾಕ್‌ಡೌನ್‌ ತೆರವುಗೊಳಿಸಲಾಗಿದೆ. ಆದರೆ, ವೈರಸ್‌ ಇಲ್ಲಿಂದ ಹೊರಗೆ ಹೋಗಿಲ್ಲ' ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಸೋಂಕಿನಿಂದ ಗುಣಮುಖ ಆಗುತ್ತಿರುವವರ ಪ್ರಮಾಣ ಸುಧಾರಿಸುತ್ತಿದೆ ಹಾಗೂ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅಮೆರಿಕ ಮತ್ತು ಬ್ರೆಜಿಲ್‌ಗೆ ಹೋಲಿಸಿದರೆ ನಮ್ಮಲ್ಲಿ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ. ಅಮೆರಿಕ, ಸ್ಪೇನ್, ಬ್ರಿಟನ್‌ನಂಥ ದೇಶಗಳಲ್ಲಿ ಇನ್ನೂ ಸಂಕಷ್ಟ ಪರಿಸ್ಥಿತಿ ಇದೆ. ವಿಶ್ವದ ಹಲವು ಸುಧಾರಿತ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಸಂಖ್ಯೆಯಲ್ಲಿ ಜನರ ಜೀವನ ಕಾಪಾಡಲು ಯಶಸ್ವಿಯಾಗಿದೆ.

ನೇರ ಪ್ರಸಾರದ ವಿಡಿಯೊ ಇಲ್ಲಿದೆ:

ಸಾಕಷ್ಟು ಸಂಖ್ಯೆಯಲ್ಲಿ ಕ್ವಾರಂಟೈನ್ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಬೆಡ್‌ಗಳು ಉಪಲಬ್ದವಿದೆ. ಕೋವಿಡ್‌ ಪರೀಕ್ಷೆ ಸಂಖ್ಯೆಯು ಶೀಘ್ರದಲ್ಲಿಯೇ 10 ಲಕ್ಷ ದಾಟಲಿದೆ. ಕೋವಿಡ್‌ ಮಹಾಮರಿ ವಿರುದ್ಧದ ಹೋರಾಟದಲ್ಲಿ ಪರೀಕ್ಷೆ ಸಂಖ್ಯೆ ಹೆಚ್ಚಾಗುವುದು ನಮ್ಮ ದೊಡ್ಡ ಶಕ್ತಿಯಾಗಲಿದೆ ಎಂದರು.

ಸೇವೆಯೇ ಪರಮ ಧರ್ಮ ಎಂಬಂತೆ ನಮ್ಮ ವೈದ್ಯರು, ನರ್ಸ್‌ಗಳು, ಸುರಕ್ಷಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ನಾನು ಶ್ಲಾಘಿಸುತ್ತೇನೆ. ಅವರ ಶ್ರಮವು ವ್ಯರ್ಥವಾಗಬಾರದು. ಕೊರೊನಾ ದೇಶದಿಂದ ಇನ್ನೂ ಹೊರಗೆ ಹೋಗಿಲ್ಲ, ಇದನ್ನು ನಾವು ಮರೆಯಬಾರದು. ನಾವು ಈಗ ಎಚ್ಚರಗೇಡಿಗಳಾಗಬಾರದು.

ಮಾಸ್ಕ್‌ ಇಲ್ಲದೆ ಹೊರಗೆ ಬರುವವರು ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ಇಂಥವರು ತಮ್ಮ ಕುಟುಂಬವನ್ನು ತಮ್ಮ ಕೈಯಾರೆ ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಅಮೆರಿಕ ಮತ್ತು ಯೂರೋಪ್‌ನ ದೇಶಗಳಲ್ಲಿ ಕೊರೊನಾ ವೈರಸ್‌ ಸೋಂಕು ಕಡಿಮೆಯಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಹಲವು ದೇಶಗಳಲ್ಲಿ ಏಕಾಏಕಿ ಸೋಂಕು ಹೆಚ್ಚಾಗುತ್ತಿದ್ದು, ಇದರಿಂದ ನಾವು ಎಚ್ಚೆತ್ತುಕೊಳ್ಳಬೇಕು.

ಕಬೀರರ ವಚನವೊಂದಿದೆ. 'ನಾವು ಫಸಲು ನೋಡಿ ಕೆಲಸ ಮುಗೀತು ಅಂತ ಖುಷಿ ಪಡ್ತೀವಿ. ಆದರೆ ಫಸಲು ಮನೆಗೆ ಬರುವವರೆಗೆ ಕೆಲಸ ನಿಲ್ಲಸಬಾರದು'. ಕೊರೊನಾ ವಿಚಾರದಲ್ಲಿಯೂ ಇದು ನಿಜ. ಮಹಾಮಾರಿಗೆ ಲಸಿಕೆ ಬರುವವರೆಗೆ ನಾವು ನಮ್ಮ ಹೋರಾಟ ನಿಲ್ಲಿಸಬಾರದು ಹಾಗೂ ಎಚ್ಚರ ಕಡಿಮೆಯಾಗಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

ಜನರನ್ನು ಉಳಿಸಲು ಸಮರೋಪಾದಿಯಲ್ಲಿ ಕೆಲಸಗಳು ಆಗುತ್ತಿವೆ. ನಮ್ಮ ದೇಶದ ವಿಜ್ಞಾನಿಗಳೂ ಲಸಿಕೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಭಾರತದಲ್ಲಿಯೂ ಲಸಿಕೆ ವಿಚಾರದಲ್ಲಿ ಆಶಾವಾದ ಬಂದಿದೆ. ಲಸಿಕೆ ಬಂದ ತಕ್ಷಣ ಪ್ರತಿ ಭಾರತೀಯನಿಗೂ ತಲುಪಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಮಚರಿತಮಾನಸದಲ್ಲಿ ಒಂದು ಒಳ್ಳೇ ಮಾತಿದೆ. 'ಅಗ್ನಿ, ಶತ್ರು, ರೋಗದ ವಿಚಾರದಲ್ಲಿ ಎಂದಿಗೂ ಕಡಿಮೆ ಅಂದಾಜು ಮಾಡಬಾರದು. ಪೂರ್ತಿ ಚಿಕಿತ್ಸೆ ಸಿಗದಿದ್ದರೆ ಅಪಾಯ ತಪ್ಪಿದ್ದಲ್ಲ' ಎಂದರು.

ಕೊರೊನಾ ವಿಚಾರದಲ್ಲಿಯೂ ಈ ಮಾತು ನಿಜ. ಔಷಧಿ ಬರುವವರೆಗೆ ಅಪಾಯ ತಪ್ಪಿದ್ದಲ್ಲ. ಎಚ್ಚರಗೇಡಿತನವು ನಮ್ಮ ಖುಷಿಯನ್ನು ನುಂಗಿಹಾಕಬಹುದು. ಎರಡು ಗಜ (6 ಅಡಿ) ಅಂತರ, ಆಗಿದ್ದಾಂಗ್ಗೆ ಸಾಬೂನಿನಿಂದ ಕೈತೊಳೆಯುವುದು, ಮಾಸ್ಕ್ ಹಾಕುವುದನ್ನು ಮರೆಯಬೇಡಿ. ನಾನು ನಿಮಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. ನೀವು ಸುರಕ್ಷಿತವಾಗಿರಬೇಕೆಂದು ನಾನು ಬಯಸುತ್ತೇನೆ. ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರಲ್ಲಿ ವಿನಂತಿಸುತ್ತೇನೆ; ದಯವಿಟ್ಟು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಜನಜಾಗೃತಿ ಅಭಿಯಾನ ನಡೆಸಿ ಎಂದು ಕೋರಿದರು.

ನಾವೆಲ್ಲರೂ ಸೇರಿ ದೇಶವನ್ನು ಮುನ್ನಡೆಸೋಣ ಎಂದ ಪ್ರಧಾನಿ, ನವರಾತ್ರಿ, ದಸರಾ, ಈದ್, ದೀಪಾವಳಿ, ಷಟ್‌ಪೂಜಾ, ಗುರುನಾನಕ್ ಜಯಂತಿ ಸೇರಿದಂತೆ ಎಲ್ಲ ಹಬ್ಬಗಳಿಗೂ ಶುಭಾಶಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT