ನವದೆಹಲಿ: ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಸೂಕ್ತ ‘ಪೋಷಣೆ‘ಯೂ ಅತ್ಯಗತ್ಯ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು ದೇಶದಾದ್ಯಂತ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ದೇಶದಲ್ಲಿರುವ ಅಪೌಷ್ಟಿಕತೆ ನಿರ್ಮೂಲನೆಗಾಗಿ ಸೋಮವಾರದಿಂದ ‘ಪೋಷಣ್ ಮಾಹ್–2020(ಪೌಷ್ಟಿಕಾಂಶ ಮಾಸ) ಆರಂಭವಾಗಿದೆ. ಸರ್ಕಾರದ ಈ ಪ್ರಯತ್ನ, ದೇಶದ ಯುವ ಸಮೂಹ ಮತ್ತು ಮಹಿಳೆಯರ ಬಲವರ್ಧನೆಗೆ ನೆರವಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತವನ್ನು ವೈವಿಧ್ಯಮಯ ಆರೋಗ್ಯಪೂರ್ಣ ಖಾದ್ಯಗಳ ತವರು ಎಂದು ಬಣ್ಣಿಸಿರುವ ಪ್ರಧಾನಿಯವರು, ನಾಗರಿಕರು ತಾವು ಸಿದ್ಧಪಡಿಸುವ ಇಂಥ ಖಾದ್ಯಗಳನ್ನು ಕೇಂದ್ರ ಸರ್ಕಾರ ನಾಗರಿಕರಿಗಾಗಿ ಮೀಸಲಿಟ್ಟಿರುವ @mygovIndia ವೇದಿಕೆಯಲ್ಲಿ ಹಂಚಿಕೊಳ್ಳುವಂತೆ ಕರೆ ನೀಡಿದರು.
ಕಳೆದ ತಿಂಗಳು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ನಾಗರಿಕರ ಅಭಿವೃದ್ಧಿಯಲ್ಲಿ ಪೋಷಕಾಂಶದ ಪ್ರಾಮುಖ್ಯ ಕುರಿತು ಮಾತನಾಡಿದ ಧ್ವನಿಯ ತುಣುಕುಗಳನ್ನು ಪ್ರಧಾನಿಯವರು ತಮ್ಮ ಟ್ವೀಟ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಅಪೌಷ್ಟಿಕತೆ ವಿರುದ್ಧ ಹೋರಾಡುವುದಕ್ಕಾಗಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ‘ಪೋಷನ್ ಮಾಹ್‘ ಆಚರಿಸಲಾಗುತ್ತದೆ.