ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಚೀನಿ ಸೈನಿಕ ನೆಲೆಗಳಿಂದ ಪಂಜಾಬಿ ಹಾಡು: ಇದೆಂಥಾ ಯುದ್ಧತಂತ್ರ

ರಾಷ್ಟ್ರೀಯ ಭದ್ರತೆ
Last Updated 19 ಸೆಪ್ಟೆಂಬರ್ 2020, 9:18 IST
ಅಕ್ಷರ ಗಾತ್ರ
ADVERTISEMENT
""
""
""
""

ಯುದ್ಧವೆನ್ನುವುದು ಕೇವಲ ಯುದ್ಧಭೂಮಿಯಲ್ಲಿ, ಬಂದೂಕುಗಳ ಮೊನೆಯಲ್ಲಿ ಮಾತ್ರವೇ ನಡೆಯುವುದಿಲ್ಲ. ಯುದ್ಧಗಳು ಮೊದಲು ನಡೆಯುವುದು ಕಮಾಂಡರ್‌ಗಳ ಮನಸ್ಸಿನಲ್ಲಿ, ಅವರ ಮನಸ್ಸಿನಲ್ಲಿ ರೂಪುಗೊಳ್ಳುವರಣತಂತ್ರಗಳ ಮುಂದುವರಿದ ಭಾಗವಷ್ಟೇ ಯುದ್ಧಭೂಮಿಯಲ್ಲಿ ಕಂಡುಬರುತ್ತದೆ, ಹೊರಜಗತ್ತಿಗೆ ತಿಳಿಯುತ್ತದೆ. ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದಬಲಾಢ್ಯ ಎನಿಸಿದ್ದ ಶತ್ರು ಸೇನೆಗಳನ್ನು ಇಂಥ ಬುದ್ಧಿವಂತ ಕಮಾಂಡರ್‌ಗಳು ತಮ್ಮ ಚಾಕಚಕ್ಯತೆ, ಸಮಯಪ್ರಜ್ಞೆ ಮತ್ತು ಬುದ್ಧಿವಂತಿಕೆಯಿಂದಮಟ್ಟಹಾಕಿದ ನಿದರ್ಶನಗಳಿಗೆ ಕೊರತೆಯಿಲ್ಲ.

ತಮ್ಮ ಸೈನಿಕರ ಮಾನಸಿಕ ದಾರ್ಷ್ಟ್ಯ, ಯುದ್ಧೋತ್ಸಾಹ ಕಾಪಾಡಿಕೊಳ್ಳುವುದರ ಜೊತೆಗೆ ವೈರಿ ಸೇನೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವುದು ಸಹ ಸಾವಿರಾರು ವರ್ಷಗಳಿಂದ ಚಾಲ್ತಿಗೆ ಬಂದಿರುವ ಪ್ರಮುಖ ಯುದ್ಧತಂತ್ರ. ಇದೀಗ ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಯುದ್ಧತಂತ್ರವನ್ನು ಹೊಸ ರೀತಿಯಲ್ಲಿ ಬೆಳಕಿಗೆ ತಂದಿದೆ.

'ಲಡಾಖ್‌ನ ಚಳಿಯಲ್ಲಿಯೂ ನಮ್ಮ ಯೋಧರಿಗೆ ಬಿಸಿ ಊಟ ಕೊಡುತ್ತೇವೆ, ಬೆಚ್ಚನೆ ಬಟ್ಟೆ ಕೊಡುತ್ತೇವೆ' ಎಂದು ಚೀನಾ ಸೇನೆ ಭಾರತೀಯ ಠಾಣೆಗಳಿಗೆ ಮುಖ ಮಾಡಿದ ಧ್ವನಿವರ್ಧಕಗಳಲ್ಲಿ ಹೇಳುತ್ತದೆ. 'ಗಡಿ ಸಂಘರ್ಷ ನಮಗೆ ಬೇಕಿಲ್ಲ. ಲಡಾಖ್ ಚಳಿಗೆ ನಡುಗಬೇಕಾದ ನಿಮ್ಮ ದುಸ್ಥಿತಿಗೆ ನಿಮ್ಮ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ' ಎಂದು ಘೋಷಿಸುತ್ತದೆ. ಇಷ್ಟೆಲ್ಲಾ ಹಿತೋಪದೇಶ ಮುಗಿದ ಮೇಲೆ ಜನಪ್ರಿಯ ಪಂಜಾಬಿ ಗೀತೆಗಳನ್ನು ಅದೇ ಧ್ವನಿವರ್ಧಕಗಳಲ್ಲಿ ಪ್ಲೇ ಮಾಡುತ್ತದೆ. ಇಂಥದ್ದೇ ಮಾಹಿತಿಯನ್ನು ಚೀನಾ ಸರ್ಕಾರದ ಮುಖವಾಣಿ 'ಗ್ಲೋಬಲ್ ಟೈಮ್ಸ್‌' ಸಹ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ.

ಇದನ್ನು ಮಿಲಿಟರಿ ಸಂವಹನ ತಂತ್ರಗಳಲ್ಲಿ 'ಪ್ರಚಾರ ಯುದ್ಧ' (ಪ್ರೊಪಗಂಡಾ ವಾರ್‌ಫೇರ್) ಎಂದು ಕರೆಯುತ್ತಾರೆ. 1962ರಲ್ಲಿಯೂ ಯುದ್ಧ ತೀವ್ರಗೊಳ್ಳುವ ಮೊದಲು ಇಂಥದ್ದೇ ತಂತ್ರಗಳನ್ನು ಚೀನಾ ಅನುಸರಿಸಿತ್ತು ಎಂಬ ಬಗ್ಗೆ ಬ್ರಿಗೇಡಿಯರ್ ಜಾನ್ ಪಿ. ದಳವಿ ಅವರ 'ಹಿಮಾಲಯನ್ ಬ್ಲಂಡರ್' ಕೃತಿಯಲ್ಲಿ ಉಲ್ಲೇಖಗಳು ಇವೆ.

ಚೀನಾ ಸೇನೆಯ ಈ ನೆಚ್ಚಿನ ಯುದ್ಧತಂತ್ರದ ಹಿಂದೆ 2200 ವರ್ಷಗಳಷ್ಟು ಹಳೆಯದಾದ 'ಗೈಕ್ಸಿಯಾ' ಯುದ್ಧದ ಅನುಭವ ಮತ್ತು 120 ವರ್ಷಗಳ ಹಿಂದಿನ ಬಾಕ್ಸರ್ಯುದ್ಧದಲ್ಲಿ ಬ್ರಿಟಿಷ್ ಆಧಿಪತ್ಯದಲ್ಲಿದ್ದ ಅಂದಿನ ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್‌ ಚೀನಾ ನೆಲೆದಲ್ಲಿ ತೋರಿದ್ದಪರಾಕ್ರಮದ ನೆರಳನ್ನೂ ಗುರುತಿಸಬಹುದು.

ಚುಶುಲ್‌ ಬ್ರಿಗೇಡ್ ಕಚೇರಿಯಲ್ಲಿ ನಗುವ ಬುದ್ಧ

ಲಡಾಖ್‌ ಪ್ರಾಂತ್ಯದಚುಶುಲ್ ಗ್ರಾಮದಲ್ಲಿಭಾರತೀಯ ಸೇನೆಯ ಬ್ರಿಗೇಡ್‌ ಕಚೇರಿಯಿದೆ. ಈಚೆಗಷ್ಟೇ ಚೀನಾ ಮತ್ತು ಭಾರತೀಯ ಸೇನೆಗಳು ಮುಖಾಮುಖಿಯಾಗಿದ್ದರೆಝಾಂಗ್‌ ಲಾ-ರೆಚಿನ್ ಲಾ ಕಣಿವೆಗಳ ಸಮೀಪವೇ ಇರುವ ಈ ಬ್ರಿಗೇಡ್‌ನ ಭೋಜನಶಾಲೆಯಲ್ಲಿ ಚಿನ್ನದಲ್ಲಿ ಎರಕಹೊಯ್ದನಗುವ ಬುದ್ಧನ ಪುರಾತನಪ್ರತಿಮೆಯೊಂದಿದೆ.

ಈ ಶಾಂತಿದೂತನ ಪ್ರತಿಮೆಗೂ, ಚೀನಾ ಸೇನೆಯು ಇದೀಗ ಲಡಾಖ್‌ಗಡಿಯಲ್ಲಿ ಧ್ವನಿವರ್ಧಕಗಳ ಮೂಲಕ ಪಂಜಾಬಿ ಹಾಡುಗಳನ್ನು ಪ್ಲೇ ಮಾಡುತ್ತಿರುವುದಕ್ಕೂ ಬಾದರಾಯಣ ಸಂಬಂಧವಿದೆ. ಮಾತ್ರವಲ್ಲ, ಸರಿಯಾಗಿ ಒಂದುಶತಮಾನದ ಹಿಂದೆ ಭಾರತೀಯ ಸೇನೆಯಿಂದ ಚೀನಾ ಅನುಭವಿಸಿದ ಸೋಲಿನ ಛಾಯೆಯ ನೆನಪೂ ಇಣುಕುತ್ತದೆ.

ಚೀನಾದ ಇತಿಹಾಸದ ಬಗ್ಗೆ ತಿಳಿದವರಿಗೆ'ಬಾಕ್ಸರ್ ಕ್ರಾಂತಿ'ಯ (1899-1901) ಪ್ರಾಮುಖ್ಯತೆಯ ಬಗ್ಗೆ ಹೊಸದಾಗಿ ವಿವರಿಸಬೇಕಿಲ್ಲ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ವಿದೇಶಿ ಗುಂಪುಗಾರಿಕೆಯ ವಿರುದ್ಧ ಚೀನಾದಯುವ ರೈತರು ಮತ್ತು ಕಾರ್ಮಿಕರು ಒಗ್ಗೂಡಿ ರೂಪಿಸಿದ ಈ ಬಂಡಾಯವನ್ನು ಹತ್ತಿಕ್ಕಲು ರಷ್ಯಾ, ಬ್ರಿಟನ್ (ಭಾರತ), ಜಪಾನ್ ಸೇರಿದಂತೆ ಹಲವು ದೇಶಗಳು ಮೈತ್ರಿಕೂಟ ರಚಿಸಿಕೊಂಡು ಸುಮಾರು 20,000 ಸೈನಿಕರನ್ನು ಕಳಿಸಿದ್ದವು. ಈ ಪೈಕಿ 8000ಮಂದಿಬ್ರಿಟಿಷರ ಅಧೀನದಲ್ಲಿ ಭಾರತೀಯ ಸೇನೆಯ ಸಿಖ್ ಮತ್ತು ಪಂಜಾಬ್ ರೆಜಿಮೆಂಟ್‌ನ ಸೈನಿಕರು ಎಂಬುದು ಉಲ್ಲೇಖಾರ್ಹ.

ಅಂದು ಚೀನಾದ ಬಂಡಾಯಗಾರರು ಬೀಜಿಂಗ್‌ನ ಫಾರಿನ್ ಲಿಗೇಶನ್ ಕ್ವಾರ್ಟರ್‌ನಲ್ಲಿ400 ವಿದೇಶಿಗರನ್ನು ಬಂಧಿಸಿಟ್ಟಿದ್ದರು. ಬಂಧನದ 55 ದಿನಕ್ಕೆ ಮೈತ್ರಿಕೂಟದ ಸೇನೆ ಬೀಜಿಂಗ್‌ ನಗರವನ್ನು ವಶಪಡಿಸಿಕೊಂಡು, ಬಂಧಿತರನ್ನು ಬಿಡುಗಡೆ ಮಾಡಿತು. ಅಂದು ಯುದ್ಧಗೆದ್ದಿದ್ದ ಬ್ರಿಟಿಷ್ ಸೈನ್ಯಾಧಿಕಾರಿಗಳುಲೂಟಿ ಮಾಡಿದ ವಸ್ತುಗಳನ್ನು ಭಾರತಕ್ಕೆ ತಂದಾಗ ಅದರಲ್ಲಿದ್ದ ನಗುವ ಬುದ್ಧಚುಶುಲ್‌ನ ಮಿಲಿಟರಿ ಮೆಸ್‌ ಅನ್ನು ತನ್ನ ತಾಣವಾಗಿಸಿಕೊಂಡ. ಈ ಪೈಕಿ 13ನೇ ಶತಮಾನದ್ದು ಎನ್ನಲಾದ ಚಿನ್ನದ ಲೇಪವಿದ್ದ ಕಂಚಿನ ಗಂಟೆಯನ್ನು ಮಾತ್ರ ಭಾರತೀಯ ಸೇನೆಯು ಬೀಜಿಂಗ್‌ನ ಟೆಂಪಲ್ ಆಫ್ ಹೆವೆನ್‌ಗೆ 1995ರಲ್ಲಿ ಮರಳಿಸಿತು.

ಬಾಕ್ಸರ್‌ ಬಂಡಾಯದಲ್ಲಿ ಅನುಭವಿಸಿದ ಅವಮಾನ ಚೀನಾ ದೇಶವನ್ನು ಬಹುಕಾಲ ಕಾಡಿತ್ತು. 1962ರಲ್ಲಿ ಭಾರತದ ಮೇಲೆ ಚೀನಾ ಮುಗಿಬೀಳಲು ಇದ್ಧ ಹಲವು ಕಾರಣಗಳಲ್ಲಿ (ಬ್ರಿಟಿಷರ ಅಧೀನದಲ್ಲಿದ್ದ) ಭಾರತೀಯ ಸೇನೆಯಿಂದಅನುಭವಿಸಿದ್ದ ಸೋಲೂ ಸಹ ಸೇರಿತ್ತು ಎಂದು ಕೆಲವರು ವಿಶ್ಲೇಷಿಸುತ್ತಾರೆ.ಆಸ್ಟ್ರೇಲಿಯಾದ ಪತ್ರಕರ್ತ ನೆವಿಲ್ಲೆ ಮ್ಯಾಕ್ಸ್‌ವೆಲ್ ಬರೆದಿರುವ 'ಇಂಡಿಯಾಸ್ ಚೈನಾ ವಾರ್' ಪುಸ್ತಕದಲ್ಲಿಯೂ ಇಂಥ ವಿಶ್ಲೇಷಣೆಗಳ ಎಳೆಗಳನ್ನು ಗುರುತಿಸಬಹುದು.

ಭಾರತೀಯ ಸೇನೆಯ ಸಿಖ್ ಯೋಧರೇ ಇದೀಗ ತಮ್ಮ ಗಡಿಯ ಮುಂಚೂಣಿ ನೆಲಗಳಲ್ಲಿದ್ದಾರೆ ಎಂದು ಭಾವಿಸಿರುವ ಚೀನಾ ಅದೇ ಕಾರಣಕ್ಕೆ ಪಂಜಾಬಿ ಹಾಡುಗಳನ್ನು ಪ್ಲೇ ಮಾಡುತ್ತಿದೆ. 1967ರಲ್ಲಿ ನಥುಲಾ ಪಾಸ್‌ನಲ್ಲಿ ಚೀನಾ ಸೇನೆಯನ್ನು ಮಣ್ಣು ಮುಕ್ಕಿಸಿದ್ದು ಸಹ ಓರ್ವ ಸಿಖ್ ಕಮಾಂಡರ್ ಎಂಬುದನ್ನೂ ಚೀನಾ ಎಂದಿಗೂ ಮರೆಯಲಾರದು.

ಯುದ್ಧಗೆಲ್ಲಲು ಹಾಡಿನ ತಂತ್ರ ಬಳಸಿದಹಾನ್

ಗಡಿಯಲ್ಲಿ ತಾನು ಪಂಜಾಬಿ ಹಾಡುಗಳನ್ನು ಪ್ಲೇ ಮಾಡುತ್ತಿರುವುದನ್ನು ಹೆಮ್ಮೆಯಿಂದ ಬರೆದುಕೊಂಡಿರುವ ಚೀನಾ ಸರ್ಕಾರದ ಮುಖವಾಣಿ'ಗ್ಲೋಬಲ್ ಟೈಮ್ಸ್‌' 'ಭಾರತೀಯ ಸೇನೆಗೆನಾಲ್ಕೂ ದಿಕ್ಕುಗಳಿಂದ ಚು ಸಾಂಗ್ಸ್‌ ಕೇಳುವ ದುಸ್ಥಿತಿ ಒದಗಿದೆ' ಎಂದು ಹೇಳಿಕೊಂಡಿದೆ.ಈ ವರದಿಯಲ್ಲಿದ್ದ 'ನಾಲ್ಕೂ ದಿಕ್ಕುಗಳಿಂದ ಚು ಸಾಂಗ್ಸ್' (Hearing Chu songs on four sides) ಎನ್ನುವುದು ಸಹ ಯುದ್ಧತಂತ್ರದ ಪಾರಿಭಾಷಿಕ ಪದ. ಈ ವರದಿಯನ್ನು ಸಾಲುಗಳ ನಡುವೆ ಓದಿಕೊಂಡಾಗ, 'ಭಾರತೀಯ ಸೇನೆಯನ್ನು ಚೀನಾ ಸೇನೆ ಎಲ್ಲ ದಿಕ್ಕುಗಳಿಂದ ಸುತ್ತುವರಿದಿದೆ' ಎಂಬ ಅರ್ಥವೂ ಬರುತ್ತದೆ.

ಆದರೆ ಧ್ವನಿವರ್ಧಕಗಳ ಮೂಲಕ ಪಂಜಾಬಿ ಜನಪ್ರಿಯ ಗೀತೆಗಳನ್ನು ಪ್ಲೇ ಮಾಡುವಚೀನಾ ಸೇನೆಯ ತಂತ್ರವು ಭಾರತೀಯ ಯೋಧರಲ್ಲಿ ಅಚ್ಚರಿ ಮೂಡಿಸಿದರೂ, ಚೀನಾದ ನಿರೀಕ್ಷೆಯಂತೆ ಅವರಮಾನಸಿಕತೆಯ ಮೇಲೆ ಯಾವುದೇ ಪರಿಣಾಮ ಉಂಟುಮಾಡಿಲ್ಲ ಎನ್ನುವುದು ನಿಜ.

ಗಡಿಯಲ್ಲಿ ಹೀಗೆ ಹಾಡು ಹಾಕುವಚೀನಾದ ಯುದ್ಧತಂತ್ರದ ಮೇಲೆ2,200 ವರ್ಷಗಳ ಹಿಂದೆ ನಡೆದ 'ಗೈಕ್ಸಿಯಾ ಯುದ್ಧ'ದ ನೆರಳಿದೆ. ಅಂದಿನ ಯುದ್ಧದಲ್ಲಿಹಾನ್ ರಾಜಮನೆತನದ ದೊರೆ ಬಾಂಗ್ ಲಿಯು ಇಂಥದ್ದೇ ತಂತ್ರ ಅನುಸರಿಸಿ ಚು ರಾಜಮನೆತನದ ದೊರೆ ಕ್ಸಿಯಾಂಗ್ಯು ಎಂಬಾತನನ್ನು ಸೋಲಿಸಿದ್ದ.ಚೀನಾದಲ್ಲಿ ಹಾನ್‌ ಮನೆತನದ ಆಧಿಪತ್ಯ ಸ್ಥಾಪಿಸಿದ್ದ.

ಆಗ, ಅಂದರೆ ಕ್ರಿ.ಪೂ. 206ರಿಂದ 202ರ ಅವಧಿಯಲ್ಲಿಚೀನಾದಲ್ಲಿ ಖ್ವಿನ್ ರಾಜಮನೆತನವು ಅಧಿಕಾರ ಕಳೆದುಕೊಂಡಿತ್ತು.ಹಾನ್ ಮತ್ತು ಚು ರಾಜ್ಯಗಳ ನಡುವೆ ಚೀನಾ ಸಾಮ್ರಾಜ್ಯ ನಿಯಂತ್ರಣಕ್ಕಾಗಿ ಯುದ್ಧಗಳು ಆರಂಭವಾಗಿದ್ದವು. ಕ್ರಿ.ಪೂ. 202ರಲ್ಲಿ ಗೈಕ್ಸಿಯಾ ಗಿರಿಶ್ರೇಣಿಗಳಲ್ಲಿ ಚು ದೊರೆ ಕ್ಸಿಯಾಂಗ್ ಯು ನೇತೃತ್ವದ ಸೇನೆಯನ್ನು ಬಾಂಗ್‌ ಲಿ ಯು ಸೇನೆ ಸುತ್ತುವರಿಯಿತು.

ಈ ಸಂದರ್ಭ ಚು ದೊರೆಗೆ ನಿಷ್ಠರಾಗಿದ್ದ ಸೈನಿಕರು ಮತ್ತು ಆ ಕಾಲದ ಸಾಟಿಯಿಲ್ಲದ ಹೋರಾಟಗಾರ ಕ್ಸಿಯಾಂಗ್ ದೊರೆಯ ಯುದ್ಧೋತ್ಸಾಹ ಕುಂದಿಸಲು ಗಿರಿಶ್ರೇಣಿಯ ಸುತ್ತಲಿಂದ ಹಾನ್ ಸೈನಿಕರು ಚು ಹಾಡುಗಳನ್ನು ಹಾಡಲು ಆರಂಭಿಸಿದರು. ಈ ಹಾಡುಗಳನ್ನು ಕೇಳಿಸಿಕೊಂಡ ಚು ಸೈನಿಕರಲ್ಲಿ ಚಿತ್ತವಿಕಲತೆ ತಲೆದೋರಿತು. 'ನಮ್ಮ ನೆಲವನ್ನು ಹಾನ್ ಪಡೆಗಳು ಅತಿಕ್ರಮಿಸಿಕೊಂಡಿವೆ, ನಮ್ಮ ಸಂಬಂಧಿಕರನ್ನು ಯುದ್ಧಭೂಮಿಗೆ ಕೈದಿಗಳಾಗಿ ಕರೆತಂದಿದ್ದಾರೆ' ಎಂದೆಲ್ಲಾ ಚಿತ್ರವಿಚಿತ್ರವಾಗಿ ಯೋಚಿಸಿಕೊಂಡ ಚು ಪಡೆಗಳು ಯುದ್ಧಭೂಮಿಯಿಂದ ಹಿಮ್ಮೆಟ್ಟಿದವು.

ಕೆಲವೇ ದಿನಗಳಲ್ಲಿ ಚು ಯೋಧರಿಗೆ ಮನೆಯತ್ತ ಸೆಳೆತ ಹೆಚ್ಚಾಗಿ ಯುದ್ಧಭೂಮಿಯಿಂದ ಹಿಂದೆ ಸರಿಯತೊಡಗಿದರು. ಎಲ್ಲಕ್ಕಿಂತ ಮುಖ್ಯವಾಗಿ ಚು ದೊರೆಯೂ ತನ್ನ ಆಪ್ತರನ್ನು ನೆನೆದು ಅತ್ತುಬಿಟ್ಟ ಎಂಬ ಸುದ್ದಿಯೊಂದು (ಪ್ರೊಪಗಂಡ) ಸೈನ್ಯದಲ್ಲಿ ಪ್ರಸಾರವಾಯಿತು. ಸರಿಸಾಟಿಯಿಲ್ಲದ ಹೋರಾಟಗಾರನೆನೆಸಿದ್ದ ಕ್ಸಿಯಾಂಗ್ ಯು ಆತ್ಮಹತ್ಯೆ ಮಾಡಿಕೊಂಡ. ಹಾನ್ ಸೇನೆ ಹೆಣೆದಿದ್ದ ಬಲೆಯಲ್ಲಿ ಚು ಸೇನೆ ಹೆಚ್ಚು ಪ್ರತಿರೋಧ ತೋರದೆನಿರ್ನಾಮವಾದ ಬಗೆಯಿದು.

'ಸಾರಾಗಡಿ' ನೆನಪಿಸಿಕೊಂಡ ಸಿಖ್ ರೆಜಿಮೆಂಟ್

ಸುಮಾರು 2200 ವರ್ಷಗಳಷ್ಟು ಹಳೆಯದಾದ ಈ 'ಹಾಡುವ' ಯುದ್ಧತಂತ್ರ ಈಗಲೂ ಉಪಯೋಗಕ್ಕೆ ಬಂದೀತೆ? ಚೀನಾ ಸೇನೆಯೇನೋ ಹಾಗೆ ಭಾವಿಸಿದಂತಿದೆ. ಆದರೆ ಕೇವಲ ಒಂದು ವಾರದ ಹಿಂದೆಯಷ್ಟೇ 'ಸಾರಾಗಡಿ ದಿನ'ದ 124ನೇ ವರ್ಷಾಚರಣೆಯನ್ನು ಹೆಮ್ಮೆಯಿಂದ ಆಚರಿಸಿಕೊಂಡಿರುವ ಸಿಖ್ ರೆಜಿಮೆಂಟ್‌ನ ಯೋಧರು'ಏನಾಗುತ್ತೋ ಆಗಲಿ, ಒಂದು ಕೈ ನೋಡಿಯೇ ಬಿಡೋಣ' ಎಂದುತೋಳು ತಟ್ಟುತ್ತಾರೆ.

12ನೇ ಸೆಪ್ಟೆಂಬರ್‌ನ1897ರಂದು 22 ಸಿಖ್ ಯೋಧರು, ಸಾವಿರಾರು ಅಫ್ಗನ್ಎದುರಾಳಿಗಳನ್ನು ಎದುರಿಸಿ ನಿಂತ'ಸಾರಾಗಡಿ' ಯುದ್ಧ ಎಂದರೆ ಭಾರತೀಯ ಸೇನೆಗೆ ಇಂದಿಗೂ ಹೆಮ್ಮೆಯ ವಿಚಾರ. ವರ್ಷಕ್ಕೊಮ್ಮೆ ಈ ಯುದ್ಧವನ್ನು ನೆನಪಿಸಿಕೊಳ್ಳುವ ಸಿಖ್ ರೆಜಿಮೆಂಟ್ ದೇಶ ರಕ್ಷಣೆ ವಿಚಾರದಲ್ಲಿ ತನ್ನ ತೋಳು ಇಂದಿಗೂ ಅಷ್ಟೇ ಗಟ್ಟಿಮುಟ್ಟು ಎಂದು 'ಸಾರಾಗಡಿ'ಯನ್ನು ನೆನಪಿಸಿಕೊಳ್ಳುವ ಮೂಲಕವೇ ಎದುರಾಳಿಗಳಿಗೆ ನೆನಪಿಸಿಕೊಡುತ್ತದೆ.

ಪಂಜಾಬಿ ಹಾಡು ಪ್ಲೇ ಮಾಡುತ್ತಿರುವ ಚೀನಾ ಸೇನೆಗೆ ಇದು ಅರ್ಥವಾಗಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT