ಪುರಿ(ಒಡಿಶಾ): ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ. ರಮಣ ಅವರು ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ನಂತರ, ಅವರು ಕಟಕ್ನಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದು ಮೂಲಗಳು ತಿಳಿಸಿವೆ.
ಎರಡು ದಿನಗಳ ಪ್ರವಾಸಕ್ಕಾಗಿ ಒಡಿಶಾಗೆ ಭೇಟಿ ನೀಡಿದ್ದ ಸಿಜೆಐ ಅವರನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ಕಾರ್ಯದರ್ಶಿ ವಿ.ಕೆ. ಪಾಂಡ್ಯನ್, ದೇವಾಲಯದ ಮುಖ್ಯ ಆಡಳಿತಾಧಿಕಾರಿ ಕೃಷ್ಣ ಕುಮಾರ್, ಜಿಲ್ಲಾಧಿಕಾರಿ ಸಮರ್ಥ ವರ್ಮಾ ಸ್ವಾಗತಿಸಿದರು.
ಆಡಳಿತ ಮಂಡಳಿಯವರು ಕೈಗೊಂಡಿರುವ ದೇವಾಲಯದ ಸೌಂದರ್ಯೀಕರಣ ಕಾರ್ಯಕ್ಕೆ ಸಿಜೆಐ ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ದೇವಾಲಯದ ಅರ್ಚಕರೊಬ್ಬರು ತಿಳಿಸಿದರು.
ಒಡಿಶಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್. ಮುರಳೀಧರ್, ಭಾರತೀಯ ಪುರಾತತ್ವ ಸರ್ವೇಕ್ಷಣಾಧಿಕಾರಿ (ಒಡಿಶಾ ವೃತ್ತ) ಅರುಣ್ ಕುಮಾರ್ ಮಲ್ಲಿಕ್ ಇದ್ದರು.