ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಸವಾಲೊಡ್ಡಲು ರಾಹುಲ್‌ ಸಮರ್ಥ: ಗೆಹಲೋತ್‌

‘ಸರ್ವ ಸಮ್ಮತ ನಾಯಕನನ್ನು ವಿರೋಧ ಪಕ್ಷಗಳು ಒಟ್ಟಾಗಿ ಆಯ್ಕೆ ಮಾಡಲಿವೆ’
Last Updated 9 ನವೆಂಬರ್ 2022, 14:08 IST
ಅಕ್ಷರ ಗಾತ್ರ

ಶಿಮ್ಲಾ (ಪಿಟಿಐ): ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲೊಡ್ಡುವ ಸಾಮರ್ಥ್ಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಇದೆ. ಆದರೆ, ಸರ್ವ ಸಮ್ಮತ ನಾಯಕ ಯಾರಾಗಬೇಕೆನ್ನುವುದನ್ನುವಿರೋಧ ಪಕ್ಷಗಳೆಲ್ಲವೂ ಒಟ್ಟಾಗಿ ನಿರ್ಧರಿಸಲಿವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಬುಧವಾರ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗೆಹಲೋತ್‌ ಅವರು, ‘ಪಕ್ಷದ ಮಾಜಿ ಅಧ್ಯಕ್ಷರೂ ಆದ ರಾಹುಲ್‌ ಗಾಂಧಿ ಭಾರತ್ ಜೋಡೊ ಯಾತ್ರೆ ಮೂಲಕ ಧ್ವನಿ ಎತ್ತುತ್ತಿರುವವಿಷಯಗಳು ಸಾರ್ವಜನಿಕರಿಗೆ ಸಂಬಂಧಿಸಿದ್ದಾಗಿವೆ. ಅವರು ನೀಡುತ್ತಿರುವ ಸಂದೇಶವೂ ದೇಶದ ಮನೆಮನೆಗಳನ್ನೂ ತಲುಪುತ್ತಿದೆ’ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ರಾಹುಲ್‌ ಗಾಂಧಿ ಅವರು ಸವಾಲೊಡ್ಡಬಹುದೇ ಎಂಬ ಪ್ರಶ್ನೆಗೆ ಗೆಹಲೋತ್‌ ‘ಅವರಿಗೆ ಸವಾಲೊಡ್ಡುವ ಶಕ್ತಿ ಇದೆ. ಇದು ಅವರಲ್ಲಿ ಆರಂಭದಿಂದಲೂ ಇತ್ತು. ಆದರೆ, ಅವರ ವ್ಯಕ್ತಿತ್ವಕ್ಕೆ ಸಾಮಾಜಿಕ ಜಾಲತಾಣದ ದುರುಪಯೋಗದ ಮೂಲಕ ಕಳಂಕ ಹಚ್ಚಲಾಯಿತು. ಈಗ ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ’ ಎಂದರು.

ವಿರೋಧ ಪಕ್ಷದ ನಾಯಕತ್ವ ಬಗ್ಗೆ ಕೇಳಿದ ಮತ್ತೊಂದು ಪ್ರಶ್ನೆಗೆ ‘ಇದನ್ನು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ನಿರ್ಧರಿಸುತ್ತವೆ. ಪ್ರತಿಪಕ್ಷಗಳು ಒಗ್ಗಟ್ಟಾಗಬೇಕೆಂದು ಇಡೀ ದೇಶ ಬಯಸಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಗೆಹಲೋತ್‌ ಉತ್ತರಿಸಿದರು.

ರಾಹುಲ್‌ ಗಾಂಧಿಯವರು ವಿಧಾನಸಭಾ ಚುನಾವಣೆಗಳ ಪ್ರಚಾರದಿಂದ ಹೊರಗುಳಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆಯಲ್ಲಿ ತೊಡಗಿದ್ದು, ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ ಅಷ್ಟೇ. ಇದರಲ್ಲಿ ಬೇರೆ ಯಾವ ಕಾರಣವೂ ಇಲ್ಲ. ಗುಜರಾತ್‌ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಪಾಲ್ಗೊಳ್ಳಬೇಕೆಂದು ಬೇಡಿಕೆ ಇದೆ. ರಾಹುಲ್‌ ಗಾಂಧಿ ಅಲ್ಲಿಗೆ ಹೋಗಬಹುದು ಅಥವಾ ಹೋಗದೇ ಇರಲೂಬಹುದು’ ಎಂದು ಗೆಹಲೋತ್‌ ಪ್ರತಿಕ್ರಿಯಿಸಿದರು.

‘ಹಿಮಾಚಲ ಪ್ರದೇಶ ಮತ್ತುಗುಜರಾತ್‌ ಎರಡೂ ರಾಜ್ಯಗಳಲ್ಲಿಪಕ್ಷವು ಸರ್ಕಾರ ರಚಿಸಲಿದೆ. ಈ ಎರಡೂ ರಾಜ್ಯಗಳಲ್ಲಿರುವ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಪೂರ್ಣ ಬಹುಮತ ತಂದುಕೊಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT