ನವದೆಹಲಿ: ಪೆಗಾಸಸ್ ಕುತಂತ್ರಾಂಶ ಬಳಸಿ ದೇಶದ 300ಕ್ಕೂ ಹೆಚ್ಚು ಜನರ ಮೊಬೈಲ್ ಸಂಖ್ಯೆಗಳ ಮೇಲೆ ಕಣ್ಗಾವಲು ಇಡಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪೆಗಾಸಸ್ ಗೂಢಚರ್ಯೆ ತಂತ್ರಾಂಶವು ಜನರನ್ನು ಸುಮ್ಮನಿರಿಸುವ ಸಾಧನ ಎಂದಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್ನ 'ಸಂಸತ್ ಘೇರಾವ್' ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಉದ್ಯೋಗದ ವಿಚಾರದಲ್ಲೂ ಅವರು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಕಿಡಿಕಾರಿದರು.
'ನಿಮ್ಮ ಮೊಬೈಲ್ ಫೋನ್ ನಿಮ್ಮ ಧ್ವನಿಯಾಗಿದೆ. ನರೇಂದ್ರ ಮೋದಿ ಅವರು ಪೆಗಾಸಸ್ ಕುತಂತ್ರಾಂಶವನ್ನು ಪ್ರತಿಯೊಬ್ಬ ಯುವಕರ ಮೊಬೈಲ್ ಫೋನಿನಲ್ಲಿ ಇಟ್ಟಿದ್ದಾರೆ, ನನ್ನ ಫೋನ್ ಮಾತ್ರವಲ್ಲ. ಒಂದು ವೇಳೆ ನೀವು ಸತ್ಯವನ್ನು ಮಾತನಾಡಿದರೆ, ನಿಮ್ಮ ಫೋನ್ಗಳಲ್ಲಿರುವ ನರೇಂದ್ರ ಮೋದಿ ಮತ್ತು ಪೆಗಾಸಸ್ ಆಲಿಸುತ್ತವೆ' ಎಂದು ಹೇಳಿದರು.
'ಪೆಗಾಸಸ್ ಎನ್ನುವುದು ಜನರ ಧ್ವನಿಯನ್ನು ಅಡಗಿಸಲು ಇರುವ ಒಂದು ಮಾರ್ಗವಾಗಿದೆ' ಎಂದು ಅವರು ಆರೋಪಿಸಿದರು.
ಪೆಗಾಸಸ್ ವಿಚಾರವಾಗಿ ಪ್ರತಿಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಅದು ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸುತ್ತಿದ್ದರೆ, ಆಡಳಿತ ಪಕ್ಷವು ಈ ಎಲ್ಲ ಆರೋಪಗಳನ್ನು ನಿರಾಕರಿಸಿದೆ.
'ದೇಶದ ಯುವಕರು ಸತ್ಯವನ್ನು ಹೇಳಲು ಆರಂಭಿಸಿದ ದಿನವೇ ಮೋದಿ ಸರ್ಕಾರ ಕುಸಿಯುತ್ತದೆ. ಮೋದಿ ಪ್ರಧಾನಿಯಾಗಿರುವವರೆಗೂ ಈ ದೇಶದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ' ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.