ಕೊಚ್ಚಿ: ಇಂಧನ ಬೆಲೆ ಏರಿಕೆ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ, ಸರ್ಕಾರವನ್ನು ನಡೆಸಿಕೊಳ್ಳುವುದಕ್ಕಾಗಿ ಜನ ಸಮಾನ್ಯರ ಜೇಬಿನಿಂದ ಹಣವನ್ನು ಬಲವಂತವಾಗಿ ದೋಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸೇಂಟ್ತೆರೇಸಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವ ಹೊರತಾಗಿಯೂ ಇಂಧನ ಬೆಲೆ ಏರಿಕೆಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ಆರ್ಥಿಕತೆ ಕುಸಿತದಲ್ಲಿ ಸರ್ಕಾರದ ಕೆಟ್ಟ ಆಡಳಿತವನ್ನು ದೂಷಿಸಿದರು. ಪರಿಸ್ಥಿತಿ ಎಷ್ಟು ಹದೆಗೆಟ್ಟಿದೆಯೆಂದರೆ ಈ ಸಮಸ್ಯೆ ಮತ್ತಷ್ಟು ಕಾಲ ಮುಂದುವರಿಯಲಿದೆ ಎಂದು ಹೇಳಿದರು.
ಈ ಬಿಕ್ಕಟ್ಟಿನಿಂದ ಹೊರಬರಲು ಜನರ ಕೈಗೆ ಹಣವನ್ನು ಹಂಚಬೇಕಿದೆ. ಆದರೆ ಸರ್ಕಾರ ಅದನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿದರು.
ನೋಟುಗಳ ಅಮಾನ್ಯೀಕರಣ, ಜಿಎಸ್ಟಿಯಿಂದಾಗಿ ಆರ್ಥಿಕತೆಯು ಹಾನಿಗೊಳಗಾಯಿತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆಗಲೇ ದುರ್ಬಲವಾಗಿದ್ದ ಆರ್ಥಿಕತೆಯು ಸಂಪೂರ್ಣವಾಗಿ ಕುಸಿಯಿತು ಎಂದು ಹೇಳಿದ್ದಾರೆ.
ಆರ್ಥಿಕತೆಯು ನಿಂತಿರುವ ಕಾರಣ ಸರ್ಕಾರದ ಬಳಿಯೀಗ ಹಣವಿಲ್ಲ. ಅವರಿಗೆ ತೆರಿಗೆಯಿಂದ ಹಣ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರವನ್ನು ನಡೆಸಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಬಲವಂತವಾಗಿಜನರ ಜೇಬಿನಿಂದ ಹಣವನ್ನು ದೋಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್ಥಿಕತೆಯು ಸರಾಗವಾಗಿ ಸಾಗಲು ಸಾಮರಸ್ಯದ ವಾತಾವರಣ ಅತ್ಯಗತ್ಯ ಎಂದವರು ಪ್ರತಿಪಾದಿಸಿದರು. ಸಾಮರಸ್ಯ, ಶಾಂತಿ, ಮತ್ತು ಯೋಜನೆ ಬೇಕು. ಅಲ್ಲಿಯೇ ಸಮಸ್ಯೆ ಎದುರಾಗಿದೆ ಎಂದರು.