ಮುಂಬೈ: ಮುಂಬೈ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಮಳೆ ಸುರಿದಿದೆ. ಹಲವು ದಿನಗಳಿಂದ ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಮುಂಬೈ ನಗರದಲ್ಲಿ ಸುರಿದ ವರ್ಷಧಾರೆ ಮುಂಗಾರು ಪೂರ್ವ ಸಿಂಚನ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಮಲ್ವಾನಿ, ಬೊರಿವಿಲಿ, ದಹಿಸರ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರ ಹೊತ್ತಿಗೆ 30 ಮಿ.ಮೀ.ನಷ್ಟು ಮಳೆ ಬಿದ್ದಿರುವುದು ದಾಖಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್ಎಂಸಿ) ನಿರ್ದೇಶಕಿ ಶುಭಾಂಗಿ ಭೂತೆ ತಿಳಿಸಿದ್ದಾರೆ.
‘ಗುಡುಗು, ಮಿಂಚು ಇದೆ. ಮಳೆ ಬೀಳುವ ತೀವ್ರತೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. ಇದನ್ನು ಮುಂಗಾರು ಪೂರ್ವ ಮಳೆ ಎಂಬುದಾಗಿ ಕರೆಯಬಹುದೇ ಹೊರತು ನೈರುತ್ಯ ಮುಂಗಾರಿನಿಂದಾದ ಮಳೆಯಲ್ಲ’ ಎಂದೂ ತಿಳಿಸಿದರು.
ಕರಾವಳಿ ಭಾಗದ ರತ್ನಗಿರಿ ಜಿಲ್ಲೆಯ ಹರ್ನಾಯ್ ಬಂದರು ಪ್ರದೇಶದಲ್ಲಿ ಮಳೆಯ ಸಿಂಚನವಾದ ಬೆನ್ನಲ್ಲೇ, ಮಹಾರಾಷ್ಟ್ರಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಿದ್ದನ್ನು ಐಎಂಡಿ ಶನಿವಾರವೇ ದೃಢಪಡಿಸಿತ್ತು. ಪೂರಕ ವಾತಾವರಣ ನಿರ್ಮಾಣವಾಗಿದ್ದರೂ ಮುಂಬೈನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಇನ್ನೂ ಬಿದ್ದಿಲ್ಲ.