ನವದೆಹಲಿ: ಕರ್ನಾಟಕದ ಬಳ್ಳಾರಿಯ ಅಂಕಸಮುದ್ರ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡದ ಅಘನಾಶಿನಿ ಜೌಗು ಪ್ರದೇಶಗಳನ್ನು ರಾಮ್ಸಾರ್ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಶಿಫಾರಸು ಮಾಡಿದೆ.
ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ 10 ಜೌಗು ಪ್ರದೇಶಗಳನ್ನು ರಾಮ್ಸಾರ್ ಪಟ್ಟಿಗೆ ಆಗಸ್ಟ್ನಲ್ಲಿ ಸೇರ್ಪಡೆ ಮಾಡಲಾಗಿತ್ತು. ಈ ಮೂಲಕ ಈ ಜೌಗು ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ಸಿಕ್ಕಿತ್ತು.
ಲೋಕಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಸೋಮವಾರ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಅವರು, ‘ಸಂರಕ್ಷಿತ ಪ್ರದೇಶಗಳ ಅಭಿವೃದ್ಧಿ ಆಯಾ ರಾಜ್ಯಗಳ ಜವಾಬ್ದಾರಿ. ಆದರೂ, ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಸಂರಕ್ಷಿತ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ವಿಶೇಷ ಯೋಜನೆಯಡಿ ಅನುದಾನ ನೀಡುತ್ತಿದೆ’ ಎಂದು ತಿಳಿಸಿದ್ದಾರೆ.
ರಂಗನತಿಟ್ಟು ಪಕ್ಷಿಧಾಮದಲ್ಲಿ 188 ಪ್ರಭೇದದ ಮರಗಳು, 225 ಪ್ರಭೇದದ ಪಕ್ಷಿಗಳು, 69 ಜಾತಿಯ ಮೀನುಗಳು, 13 ಪ್ರಭೇದದ ಕಪ್ಪೆಗಳು ಹಾಗೂ 30 ಪ್ರಭೇದದ ಚಿಟ್ಟೆಗಳು ಇವೆ. ಇದು ಭಾರತದ ಪ್ರಮುಖ ಪಕ್ಷಿಧಾಮ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಈ ಹಿಂದೆ ಗುರುತಿಸಿತ್ತು.