ಮಂಗಳವಾರ, ಮಾರ್ಚ್ 28, 2023
33 °C

ದೇವಸ್ಥಾನಗಳ ಧ್ವಂಸದ ಕುರಿತು ಪ್ರಶ್ನೆ: ಬಿಎಚ್‌ಯು ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯದ (ಬಿಎಚ್‌ಯು) ಎಂ.ಎ (ಇತಿಹಾಸ) ಪ್ರಶ್ನೆಪತ್ರಿಕೆಯಲ್ಲಿ ಮೊಘಲ್‌ ದೊರೆ ಔರಂಗಜೇಬ್‌ ಆಡಳಿತದ ವೇಳೆ ಉತ್ತರಪ್ರದೇಶದ ವಾರಾಣಸಿಯಲ್ಲಿ ಕೆಡವಲಾಗಿರುವ ದೇವಸ್ಥಾನಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. 

ಸದ್ಯ ಕಾನೂನು ಹೋರಾಟಕ್ಕೆ ಕಾರಣವಾಗಿರುವ ಕಾಶಿ ವಿಶ್ವನಾಥ ದೇವಾಲಯ– ಜ್ಞಾನವಾಪಿ ಮಸೀದಿ ಕುರಿತ ಪ್ರಶ್ನೆಯನ್ನೂ ಕೇಳಲಾಗಿದೆ. 

ಆದಿ ವಿಶ್ವೇಶ್ವರ ದೇವಸ್ಥಾನವನ್ನು ಔರಂಗಜೇಬ್‌ ಕೆಡವಿದ್ದರ ಉಲ್ಲೇಖವನ್ನು ಯಾವ ಪುಸ್ತಕದಲ್ಲಿ ನೀಡಲಾಗಿದೆ? ದೇವಸ್ಥಾನಗಳನ್ನು ಕೆಡವುದರ ಕುರಿತ ಔರಂಗಜೇಬನ ನೀತಿಯನ್ನು ವಿವರಿಸಿ? ಎಂಬ ಪ್ರಶ್ನೆಗಳನ್ನು  ಪ್ರಶ್ನೆಪತ್ರಿಕೆಯಲ್ಲಿ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ಪ್ರಶ್ನೆಗಳನ್ನು ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ಸಮರ್ಥಿಸಿಕೊಂಡಿದ್ದಾರೆ. ‘ಮಧ್ಯಕಾಲೀನ ಇತಿಹಾಸ ವಿಷಯದ ಪ್ರಶ್ನೆಪತ್ರಿಕೆ ಅದಾಗಿತ್ತು. ಹಾಗಾಗಿ ಮೊಘಲ್‌ ಆಡಳಿತದ ಕುರಿತು ಪ್ರಶ್ನೆ ಕೇಳುವುದು ಸಹಜ’ ಎಂದು ಅವರು ಹೇಳಿದ್ದಾರೆ.

ಪ್ರಶ್ನೆಪತ್ರಿಕೆಯಲ್ಲಿ ಉಲ್ಲೇಖವಾಗಿರುವ ದೇವಸ್ಥಾನಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇವೆ. ಹಾಗಾಗಿ ಆ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬಾರದಿತ್ತು ಎಂದು ಮುಸ್ಲಿಂ ನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಶ್ನೆಗಳನ್ನು ಕೇಳಿದ್ದನ್ನು ವಿರೋಧ ಪಕ್ಷಗಳೂ ವಿರೋಧಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು