ಲಖನೌ: ‘ವಾರಾಣಸಿಯಲ್ಲಿ ಈಗಿರುವ ಜ್ಞಾನವಪಿ ಮಸೀದಿಯ ಭೂಮಿಯು ಕಾಶಿ ವಿಶ್ವನಾಥ ದೇವಾಲಯಕ್ಕೆ ಸೇರಿದ್ದು, ಅದನ್ನು ದೇವಾಲಯಕ್ಕೆ ಹಸ್ತಾಂತರಿಸಬೇಕು’ ಎಂದು ಅಖಿಲ ಭಾರತೀಯ ಸಂತ ಸಮಿತಿಯು (ಎಬಿಎಸ್ಎಸ್) ಭಾನುವಾರ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದೆ.
‘ಒಂದು ವೇಳೆ ಭೂಮಿಯನ್ನು ಹಸ್ತಾಂತರಿಸದಿದ್ದಲ್ಲಿ ಈ ಸಂಬಂಧ ಆಂದೋಲವನ್ನು ಪ್ರಾರಂಭಿಸಲಾಗುವುದು’ಎಂದು ಎಬಿಎಸ್ಎಸ್ ಬೆದರಿಕೆ ಹಾಕಿದೆ.
‘ಹಿಂದೂಗಳಿಗೆ ಸೇರಿದ ಎಲ್ಲವನ್ನೂ ನೀಡಿ. ಇಲ್ಲದಿದ್ದರೆ ನಾವು ಅಯೋಧ್ಯೆಯನ್ನು ತೆಗೆದುಕೊಂಡ ರೀತಿಯಲ್ಲಿ ತೆಗೆದುಕೊಳ್ಳುತ್ತೇವೆ’ ಎಂದು ಸಮಿತಿಯ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಸಮಿತಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಲುವಾಗಿ ಸದಸ್ಯರು ವಾರಾಣಸಿಗೆ ಭೇಟಿ ನೀಡಿದ್ದು, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳು ದೇಣಿಗೆ ನೀಡಬೇಕು ಹಾಗೂ ಇದಕ್ಕಾಗಿಯೇ ಹಲವು ಕಾರ್ಯಕ್ರಮಗಳನ್ನು ಸಂಘಟಿಸಬೇಕು’ಎಂದೂ ಹೇಳಿದ್ದಾರೆ.
ವಿಶ್ವನಾಥ ದೇವಾಲಯ ಮತ್ತು ಮಸೀದಿ ಅಸ್ತಿತ್ವದಲ್ಲಿದ್ದ ಇಡೀ ಜಮೀನಿನ ಮಾಲೀಕತ್ವವನ್ನು ಪ್ರತಿಪಾದಿಸುವ ಕುರಿತ ಅರ್ಜಿ ಬಗ್ಗೆ ವಾರಾಣಸಿ ಜಿಲ್ಲಾ ನ್ಯಾಯಾಲಯವು ಈಗಾಗಲೇ ವಿಚಾರಣೆ ನಡೆಸುತ್ತಿದೆ. ದೇವಾಲಯದ ಒಂದು ಭಾಗವನ್ನು ನೆಲಸಮಗೊಳಿಸಿದ ನಂತರ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದೇ ರೀತಿ ಮಥುರಾದ ಶ್ರೀಕೃಷ್ಣನ ಜನ್ಮಭೂಮಿ ಬಳಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಮಥುರಾ ನ್ಯಾಯಾಲಯವೊಂದಕ್ಕೆ ಮೂರನೇ ಅರ್ಜಿ ಸಲ್ಲಿಸಲಾಗಿದೆ.
ಕಾಶಿ ವಿಶ್ವನಾಥ ದೇವಾಲಯ ಹಾಗೂ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯನ್ನು ಸ್ವತಂತ್ರಗೊಳಿಸುವುದಾಗಿ ಈ ಹಿಂದೆ ಬಿಜೆಪಿಯ ನಾಯಕರು ಪ್ರತಿಜ್ಞೆ ಮಾಡಿದ್ದರು.