ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕೃಷಿಕರು ಕೋವಿಡ್ ಪರಿಸ್ಥಿತಿಯ ನಡುವೆಯೂ ದೊಡ್ಡ ಸಂಖ್ಯೆಯಲ್ಲಿ ಒಂದೇ ಕಡೆ ಸೇರುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ. ಕೋವಿಡ್ ವಿರುದ್ಧ ಈ ಪ್ರತಿಭಟನಕಾರರಿಗೆ ರಕ್ಷಣೆ ಒದಗಿಸಲಾಗಿದೆಯೇ ಎಂದೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಆನಂದ್ ವಿಹಾರ್ ಬಸ್ ಟರ್ಮಿನಲ್ ಬಳಿ ಹೆಚ್ಚಿನ ಜನರ ಸೇರುವಿಕೆ ಕುರಿತು ತನಿಖೆ, ತಬ್ಲೀಗ್ ಜಮಾತ್ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನೀಡಲಾದ ಪರಿಹಾರ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೈಗೊಂಡಿತ್ತು.
‘ಕೃಷಿಕರ ಪ್ರತಿಭಟನೆಯ ವೇಳೆಯೂ ಅಂಥದೇ ಸ್ಥಿತಿ ನಿರ್ಮಾಣವಾಗಿದೆ. ಕೃಷಿಕರಿಗೆ ಕೋವಿಡ್ ವಿರುದ್ಧ ರಕ್ಷಣೆ ಸಿಗುತ್ತಿದೆಯೋ ಇಲ್ಲವೋ ತಿಳಿದಿಲ್ಲ. ಆದರೆ, ಎಲ್ಲವೂ ಮುಗಿದಿದೆ ಎಂಬ ಪರಿಸ್ಥಿತಿಯಂತೂ ಇಲ್ಲ’ ಎಂದು ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಹೇಳಿದರು.
ನ್ಯಾಯಮೂರ್ತಿಗಳಾಗಿದ್ದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಹ್ಮಣಿಯನ್ ಅವರು ಪೀಠದ ಇತರ ಸದಸ್ಯರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠವು, ಕೃಷಿಕರಿಗೆ ಕೇಂದ್ರ ಸರ್ಕಾರವು ಕೋವಿಡ್ ವಿರುದ್ಧ ರಕ್ಷಣೆ ಒದಗಿಸಿದೆಯೇ ಎಂದು ಪ್ರಶ್ನಿಸಿದಾಗ, ಮೆಹ್ತಾ ಅವರು ‘ಖಂಡಿತವಾಗಿಯೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.
ಅರ್ಜಿದಾರರಾದ ಸುಪ್ರೀಯಾ ಪಂಡಿತಾ ಅವರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಡೆ ಸೇರುವುದನ್ನು ತಡೆಯುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿಪಾದಿಸಿದರು.