ನವದೆಹಲಿ: ನೀಟ್–ಪಿಜಿ ಪ್ರವೇಶದಲ್ಲಿ ಇಡಬ್ಲ್ಯುಎಸ್ ವರ್ಗದ ಮೀಸಲು ಕೋಟಾಗೆ ಸಂಬಂಧಿಸಿದ ಅರ್ಜಿ ಕುರಿತ ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಕಾಯ್ದಿರಿಸಿತು.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು. ಲಿಖಿತವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸುವಂತೆ ಕಕ್ಷಿದಾರರಿಗೆ ನ್ಯಾಯಪೀಠ ಸೂಚಿಸಿತು.
‘ವಿಷಯಕ್ಕೆ ಸಂಬಂಧಿಸಿ ಉಂಟಾಗಿರುವ ಗೊಂದಲ ನಿವಾರಿಸಲು ಇಚ್ಛಿಸುತ್ತೇನೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿದರು.
‘ಮೀಸಲು ಕೋಟಾಕ್ಕೆ ಸಂಬಂಧಿಸಿ ನಿಯಮಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಅಖಿಲ ಭಾರತ ಕೋಟಾ ಹೊರತುಪಡಿಸಿ, ಈ ನಿಯಮಗಳನ್ನು 2019ರಲ್ಲಿಯೇ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.
ಕೆಲ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಅರವಿಂದ ದಾತಾರ್, ಶ್ಯಾಮ್ ದಿವಾನ್ ಹಾಗೂ ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಪಿ.ವಿಲ್ಸನ್ ವಾದ ಮಂಡಿಸಿದರು.