ನವದೆಹಲಿ (ಪಿಟಿಐ): ಸಹಾರಾ ಸಮೂಹಕ್ಕೆ ಸಂಬಂಧಿಸಿದ ಒಂಬತ್ತು ಕಂಪನಿಗಳ ಮೇಲಿನ ಗಂಭೀರ ಸ್ವರೂಪದ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯ (ಎಸ್ಎಫ್ಐಒ) ತನಿಖೆಗೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬೇಲಾ ಎಂ.ತ್ರಿವೇದಿ ಅವರಿದ್ದ ರಜಾಕಾಲದ ನ್ಯಾಯಪೀಠವು ಹೈಕೋರ್ಟ್ ಆದೇಶದ ವಿರುದ್ಧ ಎಸ್ಎಫ್ಐಒ ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿ, ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡುವುದು ಸಮರ್ಥನೀಯವಲ್ಲ ಎಂದು ಹೇಳಿದೆ.
ಸಹಾರಾ ಗ್ರೂಪ್ ಮುಖ್ಯಸ್ಥರ ವಿರುದ್ಧದ ಎಲ್ಲ ಪ್ರಕರಣಗಳ ಬಗ್ಗೆ ಎಸ್ಎಫ್ಐಒ ನಡೆಸುತ್ತಿರುವ ತನಿಖೆಗಳಿಗೆ 2021ರ ಡಿಸೆಂಬರ್ 13 ರಂದು ದೆಹಲಿ ಹೈಕೋರ್ಟ್ ತಡೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಸ್ಎಫ್ಐಒ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.