ನವದೆಹಲಿ: ಭಾರತದಲ್ಲಿ ಜಾತ್ಯತೀತತೆಯ ತತ್ವ ಮತ್ತು ಅದರ ಪಾಲನೆ ‘ಅಪಾಯ’ದ ಸ್ಥಿತಿಯಲ್ಲಿದೆ. ಆಡಳಿತ ವ್ಯವಸ್ಥೆಯು ಸಂವಿಧಾನದಿಂದಲೇಈ ಪದವನ್ನು ತೆಗೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.
ಆದರೆ, ದ್ವೇಷಮನಸ್ಥಿತಿ ಹೊಂದಿರುವ ಈ ಪಡೆಯು ಯಾವುದೇ ಕಾರಣಕ್ಕೂ ದೇಶದ ಜಾತ್ಯತೀತ ವ್ಯಕ್ತಿತ್ವಕ್ಕೆ ಚ್ಯುತಿ ತರಲಾಗದು ಎಂದು ತಮ್ಮ ನೂತನ ಕೃತಿ ‘ದ ಬ್ಯಾಟಲ್ ಆಫ್ ಬಿಲಾಂಗಿಂಗ್’ ಕುರಿತು ನೀಡಿದ ಸಂದರ್ಶನದಲ್ಲಿ ಅವರು ಪ್ರತಿಪಾದಿಸಿದ್ದಾರೆ.
ಸರ್ಕಾರ ಒಂದು ವೇಳೆ ಸಂವಿಧಾನದಿಂದ ಜಾತ್ಯತೀತ ಪದವನ್ನು ತೆಗೆದುಹಾಕಿದರೂ, ಅದು ತನ್ನ ಮೂಲ ಸ್ವರೂಪದಿಂದಾಗಿ ಜಾತ್ಯತೀತ ಸಂವಿಧಾನವಾಗಿಯೇ ಉಳಿಯಲಿದೆ ಎಂದು ಹೇಳಿದರು.
ಕಾಂಗ್ರೆಸ್ ಎಂದಿಗೂ ಬಿಜೆಪಿಯಂಥ ಚಿಂತನೆ ಅಳವಡಿಸಿಕೊಳ್ಳಬಯಸುವುದಿಲ್ಲ. ಸುದೀರ್ಘ ಇತಿಹಾಸದ ಕಾಂಗ್ರೆಸ್ನಲ್ಲಿ ಭಾರತದ ಜಾತ್ಯತೀತ ಚಿಂತನೆ ‘ಜೀವಂತವಾಗಿದೆ, ಉತ್ತಮ ಸ್ಥಿತಿಯಲ್ಲಿದೆ’ ಎಂದರು.
ಹಿಂದುತ್ವ ಕುರಿತು ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂಬ ಕುರಿತು ಗಮನಸೆಳೆದಾಗ, ಈ ಕುರಿತು ಮೃದು ಚಿಂತನೆ ಇದೆ ಎಂದು ನನಗೆ ಕಾಣಿಸುತ್ತಿಲ್ಲ. ಆದರೆ, ಕಾಂಗ್ರೆಸ್ನಲ್ಲಿ ಇರುವ ನಾವು, ಅಂಥ ಸ್ಥಿತಿಗೆ ಹೋಗಬಾರದು ಎಂಬುದರ ಬಗ್ಗೆ ಸ್ಪಷ್ಪತೆಯನ್ನು ಹೊಂದಿದ್ದೇವೆ ಎಂದು ಪ್ರತಿಪಾದಿಸಿದರು.
‘ಬಿಜೆಪಿ ಸ್ವರೂಪ ಅಳವಡಿಸಿಕೊಳ್ಳುವ ಯಾವುದೇ ಯತ್ನವು ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂಬುದನೇ ನಾನು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದೇನೆ’ ಎಂದು ಹೇಳಿದರು.
ಹಿಂದೂವಾದ ಮತ್ತು ಹಿಂದುತ್ವ ಕುರಿತು ಕಾಂಗ್ರೆಸ್ ಭಿನ್ನತೆಯನ್ನು ಗುರುತಿಸಲಿದೆ. ಹಿಂದೂವಾದ ಎಂದರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಪೂರ್ವ ನಿಲುವು ಹೊಂದಿಲ್ಲದೇ ಇರುವುದು. ಹಿಂದುತ್ವ ಎಂದರೆ ಪ್ರತ್ಯೇಕವಾಗಿಸುವ ರಾಜಕೀಯ ಸಿದ್ಧಾಂತ ಎಂದು ಅವರು ವ್ಯಾಖ್ಯಾನಿಸಿದರು.