ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಯನ್ನು ಕೊಂಡಾಡಿದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್

Last Updated 28 ಫೆಬ್ರುವರಿ 2021, 15:03 IST
ಅಕ್ಷರ ಗಾತ್ರ

ಜಮ್ಮು: ತಾವು ಬೆಳೆದು ಬಂದ ಹಾದಿಯ ಬಗ್ಗೆ ಹೆಮ್ಮೆ ಹೊಂದಿರುವುದಕ್ಕೆ ಮತ್ತು ಚಹಾ ಮಾರಾಟಗಾರ ಆಗಿದ್ದೆ ಎಂದು ಮುಕ್ತವಾಗಿ ಹೇಳಿಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಶ್ಲಾಘಿಸಿದ್ದಾರೆ.

‘ಗುಜ್ಜಾರ್ ದೇಶ್ ಚಾರಿಟೇಬಲ್ ಟ್ರಸ್ಟ್’ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ವ್ಯಕ್ತಿಯೊಬ್ಬ ತನ್ನ ಹಿನ್ನೆಲೆಯನ್ನು ಜಗತ್ತಿನೆದರು ಮುಚ್ಚಿಡಲು ಯತ್ನಿಸಬಾರದು’ ಎಂದು ಹೇಳಿದ್ದಾರೆ.

‘ನಾನು ಹಳ್ಳಿಯಿಂದ ಬಂದವನು. ಆ ಬಗ್ಗೆ ನನಗೆ ಹೆಮ್ಮೆಯಿದೆ. ನಮ್ಮ ಪ್ರಧಾನ ಮಂತ್ರಿಯಂತಹ ನಾಯಕರ ಬಗ್ಗೆ ನನಗೆ ಬಹಳ ಮೆಚ್ಚುಗೆಯಿದೆ. ಅವರೂ ಹಳ್ಳಿಯಿಂದ ಬಂದವರೆಂದು ಹೇಳಿಕೊಂಡಿದ್ದಾರೆ. ಚಹಾ ಮಾರಾಟ ಮಾಡುತ್ತಿದ್ದುದಾಗಿಯೂ ಹೇಳಿದ್ದಾರೆ. ನನಗೆ ಮೋದಿ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರು ಕೂಡ ಚಹಾ ಮಾರಾಟಗಾರರಾಗಿದ್ದ ಬಗ್ಗೆ ನೇರವಾಗಿ ಹೇಳಿಕೊಂಡಿದ್ದಾರೆ’ ಎಂದು ಆಜಾದ್ ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ನಾಯಕತ್ವ ಮತ್ತು ಸಾಂಸ್ಥಿಕ ಬದಲಾವಣೆಗೆ ಆಗ್ರಹಿಸಿರುವ ‘ಜಿ–23’ ನಾಯಕರು ಹಾಗೂ ಆಜಾದ್‌ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮತ್ತು ಪಕ್ಷವು ದುರ್ಬಲಗೊಳ್ಳುತ್ತಿದೆ ಎಂದು ಹೇಳಿದ ಮರುದಿನವೇ ಅವರಿಂದ ಈ ಹೇಳಿಕೆ ಮೂಡಿಬಂದಿದೆ.

ಮೋದಿ ಅವರೂ ಇತ್ತೀಚೆಗೆ ರಾಜ್ಯಸಭೆಯಲ್ಲಿ ಆಜಾದ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆಜಾದ್ ಹಾಗೂ ನಿವೃತ್ತರಾಗುತ್ತಿರುವ ರಾಜ್ಯಸಭೆ ಸದಸ್ಯರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಮಾತನಾಡಿದ್ದ ಮೋದಿ, ‘ಗುಲಾಂ ನಬಿ ಜೀ (ಪ್ರತಿಪಕ್ಷ ನಾಯಕ) ಅವರ ಸ್ಥಾನವನ್ನು ತುಂಬುವುದು ಕಷ್ಟವಿದೆ. ಅವರಂತೆಯೇ ಕೆಲಸ ಮಾಡುವುದು ಸುಲಭವಲ್ಲ. ಅವರು ತಮ್ಮ ಪಕ್ಷದ ಬಗ್ಗೆ ಮಾತ್ರ ಕಾಳಜಿ ಇದ್ದವರಲ್ಲ. ಇಡೀ ದೇಶ ಹಾಗೂ ಸದನದ ಬಗ್ಗೆ ಕಾಳಜಿಯುಳ್ಳವರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಮಾತುಗಳನ್ನಾಡುವ ಮಧ್ಯೆ ಮೋದಿ ಅವರು ಹಲವು ಬಾರಿ ಗದ್ಗದಿತರಾಗಿದ್ದರು.

‘ಭಯೋತ್ಪಾದಕ ದಾಳಿ ವೇಳೆ ಗುಜರಾತ್‌ನ ಜನ ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದಾಗ ಅವರ ರಕ್ಷಣೆಗೆ ಪ್ರಣವ್ ಮುಖರ್ಜಿ ಹಾಗೂ ಗುಲಾಂ ನಬಿ ಆಜಾದ್ ಅವರು ನೆರವಾಗಿದ್ದನ್ನು ಮರೆಯಲಾರೆ. ಆಜಾದ್ ಅವರು ನಿರಂತರವಾಗಿ ಗಮನಹರಿಸಿದರು. ತಮ್ಮದೇ ಕುಟುಂಬದವರು ಅಲ್ಲಿ ಸಿಲುಕಿದ್ದಾರೆ ಎಂಬಂತೆ ಕಾಳಜಿ ವಹಿಸಿದ್ದರು’ ಎಂದು ಮೋದಿ ನೆನಪಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT