ಮುಂಬೈ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಒಟ್ಟು 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಸಂಸದ ಅನಿಲ್ ದೇಸಾಯಿ ಭಾನುವಾರ ಪ್ರಕಟಿಸಿದರು.
ಚುನಾವಣೆಯಲ್ಲಿ ಶಿವಸೇನೆಯು ಯಾವುದೇ ಪಕ್ಷದ ಜೊತೆಗೆ ಮೈತ್ರಿ ಹೊಂದಿರುವುದಿಲ್ಲ. ನಮ್ಮ ಕಾರ್ಯಕರ್ತರು ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿರುವ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ತಿಳಿಸಿದರು.
ಬಿಹಾರ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ‘ಕಹಳೆ ಊದುತ್ತಿರುವ ಮನುಷ್ಯ’ ಆಗಿದೆ. ಚುನಾವಣಾ ಆಯೋಗವು ಶಿವಸೇನೆಗೆ ತನ್ನ ಲಾಂಛನ ಬಿಲ್ಲು ಮತ್ತು ಬಾಣ ಬಳಸಲು ಅವಕಾಶ ನೀಡಿಲ್ಲ. ಬಾಣದ ಚಿಹ್ನೆ ಜೆಡಿ (ಯು) ಪಕ್ಷದ್ದಾಗಿರುವುದು ಇದಕ್ಕೆ ಕಾರಣ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಪ್ರಚಾರ ಕಾರ್ಯಕ್ರಮ ಕುರಿತು ಪ್ರಶ್ನಿಸಿದಾಗ, ಪಕ್ಷ ಮತ್ತು ಮುಖ್ಯಮಂತ್ರಿಯೇ ಈ ಕುರಿತು ವಿವರಣೆ ನೀಡಲಿದ್ದಾರೆ ಎಂದು ಅವರು ಪ್ರತಿಕ್ರಿಯಸಿದರು.
ಶಿವಸೇನೆಯು ಬಿಹಾರ ಚುನಾವಣೆಯಲ್ಲಿ ಪ್ರಚಾರ ನಡೆಸಲು ಒಟ್ಟು 22 ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿ.ಎಂ ಅಲ್ಲದೆ ಅವರ ಪುತ್ರ, ಸಚಿವ ಆದಿತ್ಯ ಠಾಕ್ರೆ ಅವರೂ ಈ ಪಟ್ಟಿಯಲ್ಲಿದ್ದಾರೆ.
ಪಟ್ಟಿಯಲ್ಲಿ ಇರುವ ಇತರೆ ನಾಯಕರೆಂದರೆ ಸುಭಾಷ್ ದೇಸಾಯಿ, ಸಂಜಯ್ ರಾವುತ್, ಅನಿಲ್ ದೇಸಾಯಿ, ವಿನಾಯಕ ರಾವುತ್, ಅರವಿಂದ ಸಾವಂತ್, ಪ್ರಿಯಾಂಕಾ ಚತುರ್ವೇದಿ, ರಾಹುಲ್ ಶೆವಾಲೆ ಮತತು ಕೃಪಾಲ್.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ನವೆಂಬರ್ 10ರಂದು ಜರುಗಲಿದೆ.