ಶ್ರೀನಗರ: ಕಾಶ್ಮೀರದಲ್ಲಿ ಶನಿವಾರ ಸುರಿದ ಭಾರಿ ಮಳೆ ಮತ್ತು ಹಿಮಪಾತ ಸಂಬಂಧಿತ ಅವಘಡಗಳಿಂದಾಗಿ ಮೂವರು ಮೃತಪಟ್ಟಿದ್ದಾರೆ. ಸೇಬು ತೋಟಗಳಿಗೆ ಅಪಾರ ಹಾನಿಯಾಗಿದೆ.
ಶ್ರೀನಗರದಲ್ಲಿ ಶನಿವಾರ ಅಕ್ಟೋಬರ್ ತಿಂಗಳ ಕನಿಷ್ಠ ತಾಪಮಾನ ದಾಖಲಾಗಿದೆ.
ಶುಕ್ರವಾರ ರಾತ್ರಿಯೇ ಮಳೆ ಹಾಗೂ ಹಿಮಪಾತ ಆರಂಭವಾಗಿತ್ತು. ಪುಲ್ವಾಮಾದ ಟ್ರಾಲ್ ಪ್ರದೇಶದ ನೂರ್ಪೊರಾದಲ್ಲಿ ಟೆಂಟೊಂದರ ಮೇಲೆ ಭೂಕುಸಿತ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಲ್ಮಾರ್ಗ್, ಸೋನಾಮಾರ್ಗ್, ಪಹಲ್ಗಾಂ, ಶೋಪಿಯಾನ್ ಹಾಗೂ ಗ್ರುಯೆಜ್ ಪ್ರದೇಶಗಳಲ್ಲಿ ಸಾಧಾರಣ ಹಿಮಪಾತವಾಗಿದೆ. ಮೀನಾಮಾರ್ಗ್, ಲಾಡಾಖ್ನ ದ್ರಾಸ್ ಪ್ರದೇಶಗಳಲ್ಲಿಯೂ ಶುಕ್ರವಾರದಿಂದ ಹಿಮಪಾತವಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಮತ್ತು ಕುಲ್ಗಾಂ ಜಿಲ್ಲೆಗಳಲ್ಲಿ ಸೇಬು ತೋಟಗಳಿಗೆ ಅಪಾರ ಹಾನಿಯಾಗಿದೆ.