ಲಖನೌ: 2022ರ ವಿಧಾನಸಭೆ ಚುನಾವಣೆ ಬಳಿಕ ಕೇಂದ್ರ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರುವ ಸಂಭವ ಇದೆ ಎಂದು ಸಮಾಜವಾದಿ ಪಕ್ಷ ಭಾನುವಾರ ಆತಂಕ ವ್ಯಕ್ತಪಡಿಸಿದೆ.
ರಾಜಸ್ಥಾನದ ರಾಜ್ಯಪಾಲ ಕಾಲರಾಜ್ ಮಿಶ್ರಾ ಮತ್ತು ಉನ್ನಾವೊ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ಹೇಳಿಕೆಗಳನ್ನು ಇದಕ್ಕೆ ಪೂರಕವಾಗಿ ಸಮಾಜವಾದಿ ಪಕ್ಷ ಉದಾಹರಿಸಿದೆ.
ಅಗತ್ಯವಾದರೆ ಈ ಕಾಯ್ದೆಗಳನ್ನು ಮತ್ತೆ ಜಾರಿಗೆ ತರಬಹುದು ಎಂದು ಮಿಶ್ರಾ ಮತ್ತು ಮಹಾರಾಜ್ ಇಬ್ಬರೂ ಶನಿವಾರ ವರದಿಗಾರರಿಗೆ ತಿಳಿಸಿದ್ದರು.
‘ಅವರ ಹೃದಯ ಪರಿಶುದ್ಧವಾಗಿಲ್ಲ ಎಂಬುದು ಸ್ಪಷ್ಟ. ಚುನಾವಣೆ ಬಳಿಕ ಮಸೂದೆಗಳನ್ನು ಮತ್ತೆ ಮಂಡಿಸುವ ಸಾಧ್ಯತೆ ಇದೆ’ ಎಂದು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ.