ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ಅವರದ್ದು ‘ಸಾಂಸ್ಥಿಕ ಕೊಲೆ’: ಎಲ್ಗಾರ್ ಪರಿಷತ್ ಆರೋಪಿಗಳ ಸಂಬಂಧಿಕರ ಆರೋಪ

Last Updated 6 ಜುಲೈ 2021, 11:37 IST
ಅಕ್ಷರ ಗಾತ್ರ

ನವದೆಹಲಿ: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಅವರದ್ದು ‘ಸಾಂಸ್ಥಿಕ ಕೊಲೆ’ ಎಂದು ಎಲ್ಗಾರ್‌ ಪರಿಷತ್‌ ಪ್ರಕರಣದಲ್ಲಿ ಬಂಧಿಸಲಾಗಿರುವ ಇತರ ಆರೋಪಿಗಳ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಮಂಗಳವಾರ ಆರೋಪಿಸಿದ್ದಾರೆ.

‘ನಿರ್ಲಕ್ಷ್ಯ ತೋರಿದ ಜೈಲು ಅಧಿಕಾರಿಗಳು, ಅಸಡ್ಡೆ ತೋರಿದ ನ್ಯಾಯಾಲಯಗಳು ಮತ್ತು ದುರುದ್ದೇಶಪೂರಿತ ತನಿಖಾ ಸಂಸ್ಥೆಗಳು ಈ ಸಾವಿಗೆ ಜವಾಬ್ದಾರರು’ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ವಯಸ್ಸಾದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿ ಅವರನ್ನು ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿಯೂ ಜೈಲಿನಲ್ಲಿರಿಸಿದ್ದು ನ್ಯಾಯಸಮ್ಮತವಲ್ಲ ಎಂದು ಅವರು ತಿಳಿಸಿದ್ದಾರೆ.

ಜೈಲುಗಳಲ್ಲಿ ಬಂಧಿಯಾಗಿರುವ ತಮ್ಮ ಸಂಬಂಧಿಕರು ಮತ್ತು ಸಹೋದ್ಯೋಗಿಗಳೂ ‘ಇಂತಹದ್ದೇ ಅನ್ಯಾಯ’ ಎದುರಿಸುತ್ತಿರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಅವರದ್ದು ಸಹಜ ಸಾವಲ್ಲ. ಮಾನವೀಯತೆ ಇಲ್ಲದ ರಾಜ್ಯ ನಡೆಸಿದ ‘ಸಾಂಸ್ಥಿಕ ಕೊಲೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾರ್ಖಂಡ್‌ನ ಆದಿವಾಸಿಗಳ ನಡುವೆ ತಮ್ಮ ಜೀವನ ಕಳೆದ ಸ್ವಾಮಿ ಅವರು, ಆದಿವಾಸಿಗಳ ಸಂಪನ್ಮೂಲ ಮತ್ತು ಜಮೀನಿನ ಹಕ್ಕಿಗಾಗಿ ಧ್ವನಿಯಾಗಿದ್ದರು. ಅವರಿಗೆ ಈ ರೀತಿಯ ಸಾವು ಬರಬಾರದಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಜೈಲಿನಲ್ಲಿದ್ದಾಗ ಸ್ವಾಮಿ ಅವರಿಗೆ ಕೋವಿಡ್‌ ಪರೀಕ್ಷೆಯನ್ನೂ ಮಾಡಿರಲಿಲ್ಲ. ಬಾಂಬೆ ಹೈಕೋರ್ಟ್‌ನ ಆದೇಶದ ಮೇರೆಗೆ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ಬಳಿಕವಷ್ಟೇ ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬಂಧಿತರಲ್ಲಿಯೇ ಅತ್ಯಂತ ಹಿರಿಯರು ಮತ್ತು ದುರ್ಬಲರಾಗಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT