ನವದೆಹಲಿ: ಭಾರತದ ಸೇನಾ ಪಡೆಗಳಿಗೆ ಯೋಧರ ನೇಮಕಾತಿ ಕುರಿತಾದ ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸೇನಾ ನೇಮಕಾತಿಗೆ ಹೊಸ ಯೋಜನೆ ತರುವ ಮೂಲಕ ಯುವಕರ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ‘ತುಘಲಕ್’ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಭಾನುವಾರ ದೇಶದ ಹಲವು ನಗರಗಳಲ್ಲಿ ‘ಅಗ್ನಿಪಥ್ ಕಿ ಬಾತ್: ಯುವಾನ್ ಸೆ ವಿಶ್ವಾಸಘಾತ್’ ಎಂಬ ಸುದ್ದಿಗೋಷ್ಠಿಗಳನ್ನು ನಡೆಸಿದ ಕಾಂಗ್ರೆಸ್ನ 20 ಹಿರಿಯ ನಾಯಕರು ಮತ್ತು ವಕ್ತಾರರು, ರಾಷ್ಟ್ರೀಯ ಭದ್ರತೆಗೆ ಅಪಾಯ ಮತ್ತು ಯುವಕರಲ್ಲಿ ಅಸಮಾಧಾನ ಹುಟ್ಟಿಸುವ ಈ ಯೋಜನೆಯನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಯಾವುದೇ ಚರ್ಚೆಯಿಲ್ಲದ ಯುವಕರ ವಿರೋಧಿ ಮತ್ತು ದೇಶ ವಿರೋಧಿಯಾದ ಈ ಯೋಜನೆ ವಿರುದ್ಧ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ಶಕ್ತಿಸಿನ್ಹ್ ಗೋಹಿಲ್, ‘ನೆರೆಯ ಚೀನಾ ನಮ್ಮ ಗಡಿಗಳನ್ನು ಪ್ರವೇಶಿಸಿದ್ದ ಸಂದರ್ಭದಲ್ಲಿ ಅಗ್ನಿಪಥ ಯೋಜನೆಯು ರಾಷ್ಟ್ರೀಯ ಭದ್ರತೆಯ ಜೊತೆಗಿನ ಆಟದಂತಾಗಿದೆ. ಕಾಂಗ್ರೆಸ್ ಯುವಕರ ಜೊತೆ ನಿಲ್ಲಲಿದ್ದು, ತುಘಲಕ್ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.