ನವದೆಹಲಿ: ‘ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಕೊಲೆಯಲ್ಲ. ಅದು ನೇಣು ಹಾಕಿಕೊಂಡ ಪ್ರಕರಣ ಹಾಗೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ’ ಎಂದು ಏಮ್ಸ್ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಶನಿವಾರ ತಿಳಿಸಿದರು.
‘ವಿಷ ನೀಡಿ ಮತ್ತು ಕತ್ತು ಹಿಸುಕಿ ಕೊಲೆ’ ಎನ್ನುವುದನ್ನುಆರು ಸದಸ್ಯರ ವಿಧಿವಿಜ್ಞಾನ ವೈದ್ಯರಿರುವ ತಂಡ ತಳ್ಳಿಹಾಕಿದೆ. ಈ ಮಾಹಿತಿಯನ್ನು ಸಿಬಿಐ ಎದುರಿಗೆವರದಿ ಮುಖಾಂತರ ಏಮ್ಸ್ನ ವೈದ್ಯಕೀಯ ತಂಡವು ಇರಿಸಿದೆ.
‘ಇದು ನೇಣು ಹಾಕಿಕೊಂಡ ಪ್ರಕರಣ ಹಾಗೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ. ನಮ್ಮ ಅಂತಿಮ ವರದಿಯನ್ನು ನಾವು ಸಿಬಿಐಗೆ ಸಲ್ಲಿಸಿದ್ದೇವೆ. ನೇಣು ಹಾಕಿಕೊಂಡಿರುವುದರ ಗುರುತು ಹೊರತಾಗಿ ದೇಹದಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ’ಎಂದ ಡಾ. ಗುಪ್ತಾ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.
ಜೂ.14ರಂದು ಮುಂಬೈನ ಬಾಂದ್ರಾದಲ್ಲಿ ಇರುವ ತಮ್ಮ ಅಪಾರ್ಟ್ಮೆಂಟ್ ವಸತಿ ಸಮುಚ್ಚಯದಲ್ಲಿ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು ನೀಡಿದ್ದ ದೂರು ಆಧರಿಸಿ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದರು. ನಂತರದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.