ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಕೂಡಲೇ ಅವರನ್ನು ತೆಗೆಯಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತೃಣಮೂಲ ಕಾಂಗ್ರೆಸ್ ಮನವಿ ಮಾಡಿದೆ.
‘ಜಗದೀಪ್ ಧನ್ಕರ್ ಅವರು ರಾಜ್ಯ ಸರ್ಕಾರದ ವಿರುದ್ಧ ನಿಯಮಿತವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಮೂಲಕ ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರನ್ನು ರಾಜ್ಯಪಾಲರ ಹುದ್ದೆಯಿಂದ ಕೆಳಗಿಳಿಸಬೇಕು’ ಎಂದು ಟಿಎಂಸಿ ಮನವಿ ಮಾಡಿದೆ.
‘ರಾಜ್ಯಪಾಲರು ಸಾಂವಿಧಾನಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಟಿಎಂಸಿಯಲ್ಲಿ ಭಯ ಮೂಡಿಸಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
‘ಟಿಎಂಸಿ ಸಂಸದರ ತಂಡವು ರಾಷ್ಟ್ರಪತಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ರಾಜ್ಯಪಾಲರು ಮಾಡಿರುವ ಸಾಂವಿಧಾನಿಕ ಉಲ್ಲಂಘನೆ ಬಗ್ಗೆ ಹೇಳಲಾಗಿದೆ. ಅಲ್ಲದೆ ಅವರ ವಿರುದ್ಧ ಸಂವಿಧಾನದ 156(1) ವಿಧಿ ಅನುಸಾರ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ’ ಎಂದು ಸಂಸದ ಸುಕೇಂದು ಶೇಖರ್ ರಾಯ್ ಅವರು ವರದಿಗಾರರಿಗೆ ತಿಳಿಸಿದರು.
‘ಧನ್ಕರ್ ಅವರು ಜುಲೈ ತಿಂಗಳಿನಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಸರ್ಕಾರದ ಆಡಳಿತ, ಸಚಿವರು, ಅಧಿಕಾರಿಗಳ ವಿರುದ್ಧ ಟ್ವಿಟರ್ ಹಾಗೂ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರು ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿದರು.