ಚೆನ್ನೈ: ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಮ್ಲಜನಕ ಸಂಗ್ರಹಿಸಲು ಮತ್ತು ಸಂಭವನೀಯ ಕೋವಿಡ್ ಮೂರನೇ ಅಲೆ ನಿಭಾಯಿಸಲು ಮುನ್ನೆಚ್ಚರಿಕೆ ದೃಷ್ಟಿಯಿಂದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ‘ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿ’ಯಿಂದ (ಸಿಎಂಪಿಆರ್ಎಫ್) ₹100 ಕೋಟಿ ಮಂಜೂರು ಮಾಡಿದ್ದಾರೆ.
ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕಾರ್ಯಕ್ಕೆ ದಾನಿಗಳಿಂದ ಸರ್ಕಾರವು ಇಲ್ಲಿಯವರೆಗೆ ₹353 ಕೋಟಿ ಸಂಗ್ರಹಿಸಿದೆ. ಸರ್ಕಾರಕ್ಕೆ ದೇಣಿಗೆ ನೀಡುವಂತೆ ಸ್ಟಾಲಿನ್ ಜನರಲ್ಲಿ ಮನವಿ ಮಾಡಿಕೊಂಡಿದ್ದರು.
ಈ ಮೊತ್ತದಿಂದ ವಿದೇಶಗಳಿಂದ ಆಮ್ಲಜನಕ ಸಿಲಿಂಡರ್ಗಳು, ಕನ್ಸನ್ಟ್ರೇಟರ್ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಸರ್ಕಾರ ಈಗಾಗಲೇ ₹41.40 ಕೋಟಿ ಬಿಡುಗಡೆ ಮಾಡಿದೆ.
ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ಆಂಫೊಟೆರಿಸಿನ್ ಔಷಧ ಸೇರಿದಂತೆ ಜೀವ ರಕ್ಷಕ ಔಷಧಿಗಳನ್ನು ಖರೀದಿಸಲು ಈಗಾಗಲೇ ₹25 ಕೋಟಿ ಅಧಿಕ ಹಣ ಬಿಡುಗಡೆ ಮಾಡಲಾಗಿದೆ.
"ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾದ ಆಮ್ಲಜನಕವನ್ನು ಖರೀದಿಸಲು ₹100 ಕೋಟಿ ಮೀಸಲಿಡಲು ಮತ್ತು ಮೂರನೇ ಅಲೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಆರಂಭಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ,‘ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.