ಮುಂಬೈ: ಲಾಕ್ಡೌನ್ ಅನ್ನು ಕೊನೆಯ ಅಸ್ತ್ರವನ್ನಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಸೂಚನೆ ನೀಡಿದ ಒಂದು ದಿನದ ಬಳಿಕ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರವು ಮಹಾರಾಷ್ಟ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಘೋಷಿಸಿದೆ.
ವ್ಯಾಪಾರಿಗಳಿಗೆ ನಷ್ಟವುಂಟಾಗುವುದರಿಂದ ಬಿಜೆಪಿಯು ಲಾಕ್ಡೌನ್ಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹಾಗಾಗಿ, ಮಹಾರಾಷ್ಟ್ರ ಸರ್ಕಾರವು ಲಾಕ್ಡೌನ್ ಬದಲಿಗೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.
ಮಂಗಳವಾರ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಚಿವ ಸಂಪು ಸಭೆಯಲ್ಲಿ ಸಚಿವರು ಲಾಕ್ಡೌನ್ ಅಗತ್ಯವನ್ನು ಪ್ರತಿಪಾದಿಸಿದ್ದರು. ಆದರೆ, ಅಂತಿಮ ನಿರ್ಧಾರವನ್ನು ಠಾಕ್ರೆ ಅವರಿಗೆ ಬಿಟ್ಟಿದ್ದರು. ಹೀಗಾಗಿ ಬುಧವಾರ ರಾತ್ರಿ ಮಹಾರಾಷ್ಟ್ರ ಸರ್ಕಾರವು ಕೋವಿಡ್ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸರ್ಕಾರದ ಮುಖ್ಯಕಾರ್ಯದರ್ಶಿ ಸೀತಾರಾಂ ಕುಂಟೆ ಅವರು ನೂತನ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕೋವಿಡ್–19 ನಿರ್ವಹಣೆಗಾಗಿ ನೇರವಾಗಿ ತುರ್ತುಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದಲ್ಲಿ ಶೇ 15ರಷ್ಟು ಮಂದಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಸರ್ಕಾರದ ಸಿಬ್ಬಂದಿ ಮತ್ತು ತುರ್ತುಸೇವೆಗಳಲ್ಲಿ ಇರುವವರು ಮಾತ್ರ ಸ್ಥಳೀಯ ರೈಲು, ಮೆಟ್ರೊ ಮತ್ತು ಮೊನೊ ರೈಲುಸೇವೆಗಳನ್ನು ಬಳಸಲು ಅವಕಾಶವಿರುತ್ತದೆ.
ವೈದ್ಯಕೀಯ ಸೇವೆಯಲ್ಲಿರು ತೊಡಗಿರುವ ವೈದ್ಯರು, ನರ್ಸ್ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್ಗಳು, ಕ್ಲಿನಿಕಲ್ ಸಿಬ್ಬಂದಿಗೆ ಮಾತ್ರ ಗುರುತಿನ ಚೀಟಿ ಆಧಾರದ ಮೇಲೆ ಪಾಸ್ ವಿತರಿಸಲಾಗುವುದು. ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಯಾವುದೇ ವ್ಯಕ್ತಿ ಅಥವಾ ವಿಶೇಷ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು ರೈಲುಗಳಲ್ಲಿ ಪ್ರಯಾಣಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.