ಮುಂಬೈ: ‘ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನವನ್ನು ಬದಲಾವಣೆ ಆಧಾರದಲ್ಲಿ, 2019ರಲ್ಲಿ ಶಿವಸೇನಾಕ್ಕೆ ನೀಡಬೇಕೆಂಬ ಭರವಸೆಯನ್ನು ಈಡೇರಿಸದೇ ಇದ್ದ ಮೇಲೆ, ಈಗ ‘ಶಿವ ಸೈನಿಕ’ನೆಂದು ಕರೆಯಲಾಗುತ್ತಿರುವ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಯಾಕೆ ಮಾಡಲಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಇದೇ ಮೊದಲ ಬಾರಿಗೆ ಶಿವಸೇನಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ‘ಅಮಿತ್ ಶಾ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರು’ ಎಂದು ಠಾಕ್ರೆ ಹೇಳಿದ್ದಾರೆ.
‘ಮೊದಲ ಎರಡೂವರೆ ವರ್ಷಗಳ ಕಾಲ ಶಿವಸೇನಾದವರು ಸಿಎಂ ಆಗಿರಬೇಕು ಎಂದು ನಾನು ಅಮಿತ್ ಶಾ ಅವರಿಗೆ ಹೇಳಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾ ವಿಕಾಸ್ ಆಘಾಡಿಯೇ ರಚನೆಯಾಗುತ್ತಿರಲಿಲ್ಲ’ ಎಂದು ಅವರು ತಿಳಿಸಿದರು.
ಮೆಟ್ರೊ ಕಾರ್ ಶೆಡ್ ಅನ್ನು ಕಂಜುರ್ಮಾರ್ಗ್ನಿಂದ ಆರೆ ಎಂಬಲ್ಲಿಗೆ ಸ್ಥಳಾಂತರಿಸಿರುವ ಹೊಸ ಸರ್ಕಾರದ ನಿರ್ಧಾರದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಠಾಕ್ರೆ, ‘ಬಿಜೆಪಿಯು ನನಗೆ ದ್ರೋಹ ಬಗೆದಂತೆ ಮುಂಬೈಗೆ ದ್ರೋಹ ಮಾಡಬಾರದು’ ಎಂದು ಹೇಳಿದರು. ಸರ್ಕಾರದ ಕ್ರಮವನ್ನು ಅವರು ಖಂಡಿಸಿದರು.
‘ಮೆಟ್ರೋ ಕಾರ್ ಶೆಡ್ ಯೋಜನೆಯು ಕಂಜುರ್ಮಾರ್ಗ್ನಲ್ಲೇ ನಡೆಯಲಿ. ಅದು ಆರೆಗೆ ಸ್ಥಳಾಂತರಗೊಳ್ಳಬಾರದು. ಆರೆಯನ್ನು ಮೀಸಲು ಅರಣ್ಯ ಎಂದು ಈಗಾಗಲೇ ಘೋಷಿಸಲಾಗಿದೆ. ಆ ಕಾಡಿನಲ್ಲಿ ವನ್ಯಜೀವಿಗಳ ಅಸ್ತಿತ್ವ ಇದೆ. ಕಂಜುರ್ಮಾರ್ಗ್ ಖಾಸಗಿ ಸ್ವತ್ತಲ್ಲ. ನಾನು ಪರಿಸರವಾದಿಗಳೊಂದಿಗೆ ಇದ್ದೇನೆ’ ಎಂದು ಅವರು ಹೇಳಿದರು.
ಶಿವಸೇನಾದ ಬಂಡಾಯವು ಪ್ರಜಾಪ್ರಭುತ್ವದ ಅಣಕ ಎಂದು ಉದ್ಧವ ಠಾಕ್ರೆ ಹೇಳಿದರು. ಅಲ್ಲದೆ, ಜನರ ಮತ ವ್ಯರ್ಥಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.