ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಕಂಡ ಕೆಟ್ಟ ಅಧ್ಯಕ್ಷರು ಯಾರಾದರೂ ಇದ್ದರೆ ಅದು ಕಟೀಲ್ ಎಂದು ಟೀಕಿಸಿದರು.
'ಬಿಜೆಪಿ ರಾಷ್ಟ್ರೀಯ ಮುಖಂಡರಾದ ಜೆ.ಪಿ. ನಡ್ಡಾ, ಅಮಿತ್ ಶಾ, ಬಿ.ಎಲ್. ಸಂತೋಷ್ ಅವರು ಕೂಡಲೇ ಕಟೀಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರನ್ನು ನಮ್ಮ ವಶಕ್ಕೆ ನೀಡಿದರೆ, ನಾವೇ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಿ ಮಾನಸಿಕ ಚಿಕಿತ್ಸೆ ಕೊಡಿಸುತ್ತೇವೆ' ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳು ಇವೆ. ಕೋವಿಡ್ ನಿಂದ ಆರ್ಥಿಕ ದುಃಸ್ಥಿತಿ ತಲೆದೋರಿದೆ. ಕೋವಿಡ್ ನಿಂದ ಬಳಲಿ ಸಾವಿಗೀಡಾವರ ಕುಟುಂಬ ಸದಸ್ಯರಿಗೆ ಇದುವರೆಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರವನ್ನೂ ನೀಡಿಲ್ಲ. ಆದರೂ ಆ ಬಗ್ಗೆ ಬಿಜೆಪಿ ರಾಜ್ಯ ಅಧ್ಯಕ್ಷರು ಕಳಕಳಿ ವ್ಯಕ್ತಪಡಿಸಿಲ್ಲ ಎಂದು ಅವರು ದೂರಿದರು.
ಧರ್ಮದ ಅಫೀಮು ಸೇವಿಸಿ, ಅಮಲಿನಲ್ಲಿ ತೇಲುತ್ತಿರುವ ಸಂಘ ಪರಿವಾರದ ಹಿನ್ನೆಲೆಯ ಕಟೀಲ್ ಅವರು ರಾಹುಲ್ ಗಾಂಧಿ ಕುರಿತು ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದರು.
'ರಾಜ್ಯದ ಸುಪ್ರಸಿದ್ಧ ಧಾರ್ಮಿಕ ತಾಣವಾದ ಕಟೀಲು ಪುಣ್ಯ ಕ್ಷೇತ್ರದ ಹೆಸರಲ್ಲಿ ಗುರುತಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಅವರು ಹೆಸರಿಗೆ ತಕ್ಕಂತೆ ವರ್ತಿಸಲಿ ಎಂದು ಸಲಹೆ ನೀಡಿದ ಅವರು, ಮಾನಸಿಕವಾಗಿ ಬಳಲುತ್ತಿರುವ ಕಟೀಲ್ ಅವರನ್ನು ನಾವೇ ಪುನರ್ವಸತಿ ಕೇಂದ್ರಕ್ಕೆ ದಾಖಲಿಸುತ್ತೇವೆ' ಎಂದು ಹೇಳಿದರು.