ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಉತ್ತರ ಪ್ರದೇಶ ಸಚಿವ

Last Updated 24 ಸೆಪ್ಟೆಂಬರ್ 2021, 9:00 IST
ಅಕ್ಷರ ಗಾತ್ರ

ಬಲ್ಲಿಯಾ(ಉತ್ತರ ಪ್ರದೇಶ): ‘ರಾಮ, ಕೃಷ್ಣ ಮತ್ತು ಶಿವ ಭಾರತದ ಮುಸ್ಲಿಮರ ಪೂರ್ವಜರಾಗಿದ್ದು, ಈ ಸಮುದಾಯದವರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು‘ ಎಂದು ಉತ್ತರ ಪ್ರದೇಶ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಆನಂದ್ ಸ್ವರೂಪ್‌ ಶುಕ್ಲಾ ಹೇಳಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ನಾಲ್ಕೂವರೆ ವರ್ಷಗಳ ಮಾಡಿದ ಸಾಧನೆಗಳ ಕುರಿತು ಮಾಹಿತಿ ನೀಡುವುದಕ್ಕಾಗಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರು ‘ಭಾರತೀಯ ಸಂಸ್ಕೃತಿ ಮತ್ತು ಹಿಂದುತ್ವದ ಧ್ವಜವನ್ನು ಹಾರಿಸುವ ಮೂಲಕ ದೇಶದಲ್ಲಿ ಇಸ್ಲಾಮಿಕ್ ರಾಜ್ಯ ರಚಿಸಬೇಕೆಂಬ ಉದ್ದೇಶದ ಮನೋಭಾವದವರನ್ನು ಹಿಮ್ಮೆಟ್ಟಿಸಿದ್ದಾರೆ‘ ಎಂದು ಹೇಳಿದ್ದಾರೆ.

‘ಶ್ರೀರಾಮ, ಕೃಷ್ಣ ಮತ್ತು ಶಂಕರ(ಶಿವ) ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು. ಆದ್ದರಿಂದ ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು‘ ಎಂದು ಹೇಳಿದ್ದಾರೆ.

‘ಸಿರಿಯಾ ಮತ್ತು ಅಫ್ಗಾನಿಸ್ತಾನ ನಂತರ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು, ವಿಶ್ವವನ್ನೇ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಬೇಕು ಎಂದು ಬಯಸಿವೆ. ಭಾರತದಲ್ಲೂ ಇಂಥ ಮನಸ್ಥಿತಿಯವರಿದ್ದಾರೆ. ಆದರೆ, ಮೋದಿ ಮತ್ತು ಆದಿತ್ಯನಾಥ್ ನೇತೃತ್ವದ ಸರ್ಕಾರಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯ ಧ್ವಜವನ್ನು ಹಾರಿಸುವ ಮೂಲಕ, ಇಸ್ಲಾಂ ರಾಷ್ಟ್ರವಾಗಿಸುವ ಮನಸ್ಥಿತಿಯನ್ನೇ ಸೋಲಿಸಿದ್ದಾರೆ‘ ಎಂದು ಶುಕ್ಲಾ ಹೇಳಿದರು.

ಇತ್ತೀಚೆಗೆ ಸಂಭಾಲ್‌ನಲ್ಲಿ ಹಾಕಲಾಗಿದ್ದ ವಿವಾದಾತ್ಮಕ ಭಿತ್ತಿಪತ್ರವೊಂದರ ಕುರಿತು ಉಲ್ಲೇಖಿಸಿದ ಶುಕ್ಲಾ, ‘ಇದು ಸಮಾಜವಾದಿ ಪಕ್ಷದವರು ಇಸ್ಲಾಮಿಕ್ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಹಾಗೂ ಆ ಪಕ್ಷದ ಸಂಸದ ಶೈಫುರ್ ರಹಮಾನ್ ಅವರು ತಾಲಿಬಾನ್‌ ಬೆಂಬಲಿಸುವ ಹೇಳಿಕೆಗಳನ್ನು ನೀಡುತ್ತಿರುವುದರ ಪರಿಣಾಮ‘ ಎಂದು ಪ್ರತಿಪಾದಿಸಿದರು.

ಸಂಭಾಲ್‌ನಲ್ಲಿ ಹಾಕಿದ್ದ ಪೋಸ್ಟರ್‌ನಲ್ಲಿ ‘ಸಂಭಾಲ್‌ ಘಾಜಿಗಳ ನೆಲ‘ ಎಂದು ಬರೆಯಲಾಗಿತ್ತು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ ನಂತರ ಅಖಿಲ ಭಾರತ ಮಜ್ಲಿಸ್‌–ಇತ್ತೇಹಾದುಲ್‌ ಮುಸ್ಲಿಮೀನ್‌(ಎಐಎಂಎಐಎಂ) ಕಾರ್ಯಕರ್ತರು ಅವುಗಳನ್ನು ತೆಗೆದು ಹಾಕಿದರು. ಈ ವಾರದ ಆರಂಭದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಭೇಟಿಗೂ ಮುನ್ನ ಸಂಭಾಲ್‌ನಲ್ಲಿ ಈ ಪೋಸ್ಟರ್‌ ಹಾಕಲಾಗಿತ್ತು.

‘ಉತ್ತರ ಪ್ರದೇಶದಿಂದ ಈಗಾಗಲೇ ಘಾಜಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಭವಿಷ್ಯದಲ್ಲಿ ಅಂತಹ ಶಕ್ತಿಗಳು ತಲೆ ಎತ್ತಲು ಸಾಧ್ಯವಾಗುವುದಿಲ್ಲ‘ ಎಂದು ಶುಕ್ಲಾ ಹೇಳಿದರು.

ಎಐಎಂಎಐಎಂ ನಾಯಕ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದ ಶುಕ್ಲಾ, ‘ಇವರ ಪೂರ್ವಿಕರು ದೇಶದಿಂದ ಹೈದರಾಬಾದ್‌ ಅನ್ನು ಪ್ರತ್ಯೇಕಿಸಲು ಪ್ರಯತ್ನಿಸಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT