ಬಂದಾ (ಉತ್ತರ ಪ್ರದೇಶ): ಗುರುವಾರ ಇಲ್ಲಿನ ಯಮುನಾ ನದಿಯಲ್ಲಿ ದೋಣಿ ಮಗುಚಿ ಬಿದ್ದಿದ್ದು, 25 ಜನರು ನಾಪತ್ತೆಯಾಗಿದ್ದಾರೆ. ಈವರಗೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ನೆರವಿಗಾಗಿ ಪ್ರಯಾಗ್ರಾಜ್ನಿಂದ ಮುಳುಗು ತಜ್ಞರನ್ನು ಸಹ ಕರೆಸಲಾಗಿದೆ.
ದುರಂತದಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಉಪ ಮಹಾನಿರೀಕ್ಷಕ ವಿಪಿನ್ ಮಿಶ್ರಾ ತಿಳಿಸಿದ್ದಾರೆ.
ಫತೇಪುರ್ ಜಿಲ್ಲೆಯ ಮರ್ಕಾದಿಂದ ಜರೌಲಿ ಘಾಟ್ಗೆ ತೆರಳುತ್ತಿದ್ದ ದೋಣಿ ಮಗುಚಿ ನದಿಗೆ ಬಿದ್ದಿತ್ತು. ಅದರಲ್ಲಿ 30ಕ್ಕೂ ಹೆಚ್ಚು ಮಂದಿ ಇದ್ದರು.
ಜಿಲ್ಲೆಯ ಮಾರ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಡಿಐಜಿ ಮಿಶ್ರಾ ಶುಕ್ರವಾರ ಳಿಸಿದರು.
‘ಗುರುವಾರ ಮುಳುಗು ತಜ್ಞರು ಮೂರು ಮೃತದೇಹಗಳನ್ನು ಹೊರತೆಗೆದಿದ್ದು, ಇನ್ನೂ 20-25 ಜನರು ನಾಪತ್ತೆಯಾಗಿದ್ದಾರೆ’ಎಂದು ಅವರು ಹೇಳಿದ್ದಾರೆ.
ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮಾರ್ಕ ಎಸ್ಎಚ್ಒ ಹೇಮರಾಜ್ ಸರೋಜ್ ತಿಳಿಸಿದ್ದಾರೆ. ‘ಅತಿ ವೇಗದ ಗಾಳಿಯಿಂದಾಗಿ, ಬಂಡಾ ಜಿಲ್ಲೆಯ ಗಡಿಯ ಬಳಿ ದೋಣಿ ಮಗುಚಿ ಬಿದ್ದಿದೆ’ ಎಂದು ಅವರು ಹೇಳಿದರು.
ಮೃತರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ ತಲಾ ₹ 4 ಲಕ್ಷ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.