ಸಿದ್ಧಾರ್ಥನಗರ(ಉತ್ತರಪ್ರದೇಶ): ಮೊದಲ ಡೋಸ್ ಕೋವಿಶೀಲ್ಡ್ ಪಡೆದಿದ್ದ 20 ಗ್ರಾಮಸ್ಥರಿಗೆ ಕೋವ್ಯಾಕ್ಸಿನ್ ನೀಡಿ ಆರೋಗ್ಯ ಕಾರ್ಯಕರ್ತರು .ಅಚಾತುರ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.
ಬರ್ಹ್ನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಅಚಾತುರ್ಯ ನಡೆದಿದೆ. ಮೇ 14 ರಂದು ಆಡಾಹಿ ಕಲಾ ಮತ್ತು ಇನ್ನೊಂದು ಹಳ್ಳಿಯ ಗ್ರಾಮಸ್ಥರು ಇಲ್ಲಿ ಕೋವಾಕ್ಸಿನ್ ಲಸಿಕೆಗಳನ್ನು ಪಡೆದಿದ್ದಾರೆ.
ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದ್ದು ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ವೈದ್ಯಕೀಯ ಅಧಿಕಾರಿ ಸಂದೀಪ್ ಚೌಧರಿ ಭರವಸೆ ನೀಡಿದ್ದಾರೆ.
ಲಸಿಕೆ ವ್ಯತ್ಯಾಸದಿಂದ ಹಳ್ಳಿಗರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಿಲ್ಲ. ಆರೋಗ್ಯ ಇಲಾಖೆಯ ತಂಡ ಈಗಾಗಲೇ ಅವರನ್ನು ಭೇಟಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಮತ್ತು ಎರಡನೆಯ ಡೋಸ್ ವಿಭಿನ್ನ ಲಸಿಕೆಗಳನ್ನು ಪಡೆದಿದ್ದಾರೆ ಎಂದು ಗ್ರಾಮಸ್ಥ ರಾಮ್ ಸೂರತ್ ಅವರು, ಆರೋಗ್ಯ ಕಾರ್ಯಕರ್ತರ ಗಮನಕ್ಕೆ ತಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಆರೋಗ್ಯ ಕಾರ್ಯಕರ್ತರ ಕಡೆಯಿಂದ ಆಗಿರುವ ತಪ್ಪನ್ನು ಒಪ್ಪಿಕೊಂಡ ಸಿಎಂಒ, 20 ಜನರಿಗೆ ಮೊದಲ ಮತ್ತು ಎರಡನೇ ಡೋಸ್ ವಿಭಿನ್ನ ಲಸಿಕೆಗಳನ್ನು ನೀಡಲಾಗಿದೆ. ವೈದ್ಯಕೀಯ ತಂಡಗಳು ಅವರ ಮೇಲೆ ನಿಗಾ ವಹಿಸುತ್ತಿವೆ ಎಂದು ಹೇಳಿದ್ದಾರೆ.
ವಿಭಿನ್ನ ಲಸಿಕೆಗಳನ್ನು ಪಡೆದ ಜನರು ಒತ್ತಡದಲ್ಲಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರಿಗೂ ಇದುವರೆಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.