ಕ್ರೈಸ್ತರು ಎಸಗಿದ 'ಅಪರಾಧ'ಕ್ಕೆ ಪೋಪ್ ಫ್ರಾನ್ಸಿಸ್ ಕ್ಷಮೆ ಕೇಳಬೇಕು: ವಿಎಚ್ಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಭಾರತಕ್ಕೆ ಆಹ್ವಾನಿಸಿ ಒಂದು ತಿಂಗಳು ಕಳೆದಿದೆ. ಫ್ರಾನ್ಸಿಸ್ ಅವರು ಭಾರತಕ್ಕೆ ಆಗಮಿಸಿದಾಗ 'ಕ್ರೈಸ್ತರು ಎಸಗಿರುವ ಅಪರಾಧಗಳಿಗೆ ಕ್ಷಮೆ ಕೇಳಬೇಕು' ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಆಗ್ರಹಿಸಿದೆ.
ಗುಜರಾತ್ನ ಜುನಾಗಢದಲ್ಲಿ ನಡೆಯುತ್ತಿರುವ ಟ್ರಸ್ಟಿ ಮತ್ತು ಗವರ್ನಿಂಗ್ ಕೌನ್ಸಿಲ್ನ ಎರಡನೇ ದಿನದ ಸಭೆಯಲ್ಲಿ ವಿಎಚ್ಪಿಯ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಮಾತನಾಡಿದರು. ಪೋಪ್ ಭಾರತಕ್ಕೆ ಆಗಮಿಸಿದಾಗ ಕ್ಷಮೆ ಕೇಳಬೇಕು ಮತ್ತು ಮತಾಂತರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
'ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿ ಪೋಪ್ ಅವರು ಮಾತನಾಡಬೇಕು. 350 ವರ್ಷಗಳ ಕಾಲ ಕ್ರೈಸ್ತರು ನಿರಂತರವಾಗಿ ಮತಾಂತರದ ಪ್ರಯತ್ನಗಳನ್ನು ನಡೆಸಿದ್ದಾರೆ, ಜನಾಂಗೀಯ ಹತ್ಯೆ ಮಾಡಿದ್ದಾರೆ ಮತ್ತು ಸಾಮೂಹಿಕ ಮತಾಂತರ ನಡೆಸಿದ್ದಾರೆ. ಆದ್ದರಿಂದ ಪೋಪ್ ಭಾರತಕ್ಕೆ ಆಗಮಿಸಿದಾಗ, ಇದೆಲ್ಲದಕ್ಕೂ ಕ್ಷಮೆ ಕೇಳಬೇಕು. ಮತಾಂತರವನ್ನು ನಿಲ್ಲಿಸುವ ಮೂಲಕ ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು' ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ತಾಯಿ ಪ್ರೀತಿ: ಸ್ವಾಗತಿಸಲು ಹೂಗುಚ್ಛ ತಂದಿದ್ದ ಮಗನಿಗೆ ಚಪ್ಪಲಿ ಏಟು, ವಿಡಿಯೊ ನೋಡಿ
ಹೆಚ್ಚು ಕ್ರೈಸ್ತರಿರುವ ಗೋವಾ ಮತ್ತು ಮಣಿಪುರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನೆವೇ 'ಪೋಪ್ ಕ್ಷಮೆಯಾಚಿಸಬೇಕು' ಎಂದು ವಿಎಚ್ಪಿ ಆಗ್ರಹಿಸುತ್ತಿರುವುದರಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
1999ರಲ್ಲಿ ಪೋಪ್ 2ನೇ ಜಾನ್ ಪೌಲ್ ಅವರು ಭಾರತಕ್ಕೆ ಆಗಮಿಸಿದ್ದಾಗ, ಬೈಬಲ್ನಲ್ಲಿರುವ ಕ್ರೈಸ್ತರ ದೇವರನ್ನು ಹೊರತುಪಡಿಸಿ ಬೇರೆ ದೇವರುಗಳ ಸಿಂಧುತ್ವವನ್ನು ಘೋಷಿಸುವಂತೆ ವಿಎಚ್ಪಿ ಒತ್ತಾಯಿಸಿತ್ತು. ರಾಷ್ಟ್ರದೆಲ್ಲೆಡೆ ಮತಾತಂರ ನಿಷೇಧ ಕಾಯ್ದೆ ತರಬೇಕು ಎಂಬುದು ವಿಎಚ್ಪಿಯ ಪ್ರಮುಖ ಒತ್ತಾಯವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದೆ.
ಇತ್ತೀಚೆಗೆ ಇಟಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಇಬ್ಬರು ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.