ಪುರುಲಿಯಾ (ಪ.ಬಂಗಾಳ): ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾವೋವಾದಿಗಳ ಹೊಸ ತಳಿಯನ್ನು ಸೃಷ್ಟಿ ಮಾಡಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪುರುಲಿಯಾದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಿಜೆಪಿ ಅಭಿಯಾನದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ತೃಣಮೂಲ ಕಾಂಗ್ರೆಸ್ ಸರ್ಕಾರ ಮತ್ತು ಹಿಂದಿನ ಎಡರಂಗ ಆಡಳಿತಗಳ ವಿರುದ್ಧ ವಾಗ್ದಾಳಿ ನಡೆಸಿದರು.
ದಲಿತರನ್ನು, ಹಿಂದುಳಿದ ಮತ್ತು ಆದಿವಾಸಿಗಳನ್ನು ಟಿಎಂಸಿ ಎಂದಿಗೂ ತನ್ನವರೆಂದು ಪರಿಗಣಿಸಿಲ್ಲ. ಅವರೆಲ್ಲರೂ ಆಡಳಿತ ಪಕ್ಷದ ಹಣ ಲೂಟಿ ಮಾಡುವ ಸಂಸ್ಕೃತಿಯ ಬಲಿಪಶುಗಳಾಗಿದ್ದಾರೆ ಎಂದು ಹೇಳಿದರು.
ಅಕ್ರಮ ನುಸುಳುವಿಕೆಯ ವಿರುದ್ಧವೂ ಪ್ರಧಾನಿ ಮೋದಿ ಸ್ವರವೆತ್ತಿದರು. ಇದರ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ ಎಂದು ಟೀಕಿಸಿದರು.
ಈ ಬಾರಿಯ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ನಿರ್ಮೂಲನೆ ಖಚಿತ ಎಂದು ಮೋದಿ ಹೇಳಿದರು. ಕಳೆದ 10 ವರ್ಷಗಳ ದುರಪಯೋಗ ಹಾಗೂ ಕೆಟ್ಟ ಆಡಳಿತಕ್ಕಾಗಿ ಭಾರಿ ಬೆಲೆ ತೆರಬೇಕಾಗಿದೆ. ಬಂಗಾಳವು ಬಹಳ ಹಿಂದೆಯೇ ತನ್ನ ಮನಸ್ಸನ್ನು ಬದಲಾಯಿಸಿದೆ. ಟಿಎಂಸಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅರ್ಧದಷ್ಟು ಮತ್ತು ಈ ಬಾರಿ ಸಂಪೂರ್ಣವಾಗಿ ಸಚ್ಛವಾಗಲಿದೆ ಎಂದು ಹೇಳಿದರು.
ದೀದಿ ತಮ್ಮ ಹತಾಶೆಯನ್ನು ನನ್ನ ಮೇಲೆ ಹೊರ ಹಾಕುತ್ತಿದ್ದಾರೆ. ಆದರೆ ನನ್ನ ಪಾಲಿಗೆ ಅವರು ಭಾರತದ ಕೋಟ್ಯಂತರ ಹೆಣ್ಣು ಮಕ್ಕಳಂತೆ ಆಗಿದ್ದಾರೆ. ಅವರಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದರು.
ಟಿಎಂಸಿ ಹಾಗೂ ಎಡ ಸರ್ಕಾರಗಳು ಪುರುಲಿಯಾ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ನೀರಿನ ಬಿಕ್ಕಟ್ಟು, ಬಲವಂತದ ವಲಸೆ ಮತ್ತು ತಾರತಮ್ಯ ಆಡಳಿತವನ್ನು ನೀಡಿದೆ. ಟಿಎಂಸಿ ಸರ್ಕಾರದ ಕಡೆಗಣನೆಯಿಂದಾಗಿ ಪುರುಲಿಯಾ ಭಾರಿ ನೀರಿನ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದರು.
ಮೊದಲು ಎಡ ಸರ್ಕಾರ ಮತ್ತು ನಂತರ ಟಿಎಂಸಿ ಸರ್ಕಾರಗಳು ಕೈಗಾರಿಕೆಗಳ ಅಭಿವೃದ್ಧಿಗೆ ತಡೆಯೊಡ್ಡಿದ್ದವು. ನೀರಾವರಿಗೆ ಆಗಬೇಕಾದ ಕೆಲಸಗಳು ನಡೆಯಲಿಲ್ಲ. ಜಾನುವಾರು ಸಾಕಾಣೆಯಲ್ಲಿ ಎದುರಾಗುವ ಸಮಸ್ಯೆಯ ಬಗ್ಗೆಯೂ ನನಗೆ ಅರಿವಿದೆ ಎಂದರು.