ಜೈಪುರ (ಪಿಟಿಐ):ರಾಜಸ್ಥಾನದ ರಾಜಸಮಂದ್ ಜಿಲ್ಲೆ ನಾಥದ್ವಾರದಲ್ಲಿ ನಿರ್ಮಿಸಿರುವ 369 ಅಡಿ ಎತ್ತರದ ‘ವಿಶ್ವಾಸ್ ಸ್ವರೂಪಂ’ ಶಿವ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಲಾಯಿತು.
‘ವಿಶ್ವಾಸ್ ಸ್ವರೂಪಮ್’ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹಲೋತ್, ವಿಧಾನಸಭೆ ಸ್ಪೀಕರ್ ಸ್ಪೀಕರ್ ಸಿ.ಪಿ. ಜೋಶಿ, ಧಾರ್ಮಿಕ ಮುಖಂಡ ಮೊರಾರಿ ಬಾಪು ಅವರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
‘ರಾಮ್ ಕಥಾದ ಪ್ರತಿ ಸಂದರ್ಭವು ಪ್ರೀತಿ, ಸಾಮರಸ್ಯ ಮತ್ತು ಭ್ರಾತೃತ್ವದ ಸಂದೇಶ ನೀಡುತ್ತದೆ. ಇದು ಇಂದು ದೇಶದಲ್ಲಿ ಹೆಚ್ಚು ಅಗತ್ಯವಾಗಿದೆ. ಇಂತಹ ಕಥಾಗಳನ್ನು ದೇಶದ ಎಲ್ಲೆಡೆ ಆಯೋಜಿಸಬೇಕು’ ಎಂದು ಗೆಹಲೋತ್ ಹೇಳಿದರು.
ಉದಯಪುರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಪ್ರತಿಮೆಯನ್ನು ತತ್ ಪದಮ್ ಸಂಸ್ಥಾನ ನಿರ್ಮಿಸಿದೆ. ಪ್ರತಿಮೆ ಅನಾವರಣದ ಬಳಿಕ ಅ.29 ರಿಂದ ನ. 6ರ ವರೆಗೂ ಸರಣಿ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಪ್ರವಚನಕಾರ ಮೊರಾರಿ ಬಾಪು ಸಹ ರಾಮ ಕಥಾ ಪ್ರವಚನ ನೀಡಲಿದ್ದಾರೆ.
ಗುಡ್ಡ ಪ್ರದೇಶದಸುಮಾರು 16.5 ಎಕರೆ ಜಾಗದಲ್ಲಿ ಧ್ಯಾನದ ಭಂಗಿಯಲ್ಲಿ ಕುಳಿತ ಶಿವನ ವಿಗ್ರಹ ನಿರ್ಮಿಸಲಾಗಿದೆ. 20 ಕಿ.ಮೀ ದೂರವರೆಗೂ ಈ ವಿಗ್ರಹ ಕಾಣಿಸುತ್ತದೆ ಎನ್ನಲಾಗಿದೆ. ವಿಶೇಷ ದೀಪಗಳಿಂದ ಬೆಳಗುವ ಕಾರಣ ಪ್ರತಿಮೆ ರಾತ್ರಿ ವೇಳೆ ಕೂಡ ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರತಿಮೆ ನಿರ್ಮಿಸಲು 10 ವರ್ಷ ಬೇಕಾಯಿತು. 3,000 ಟನ್ ಉಕ್ಕು ಮತ್ತು ಕಬ್ಬಿಣ ಹಾಗೂ 2.5 ಲಕ್ಷ ಘನ ಟನ್ ಕಾಂಕ್ರೀಟ್ ಮತ್ತು ಮರಳನ್ನು ಬಳಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.