ಚೀನಾ ಸೇನೆಯಿಂದ ಐವರ ಅಪಹರಣ?

ಗುವಾಹಟಿ: ಲಡಾಖ್ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯ ಬೆನ್ನಲ್ಲೇ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಸೇನೆ ಶುಕ್ರವಾರ ಐವರು ಸ್ಥಳೀಯ ಯುವಕರನ್ನು ಅಪಹರಿಸಿದೆ ಎಂಬ ಸುದ್ದಿ ಆತಂಕ ಮೂಡಿಸಿದೆ.
ಚೀನಾ ಗಡಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದ ಸುಭಾನ್ಸಿರಿ ಜಿಲ್ಲೆಯ ಪ್ರಸಾದ್ ರಿಂಗ್ಲಿಂಗ್ ಮತ್ತು ಇತರ ನಾಲ್ವರನ್ನು ಚೀನಾ ಸೇನೆ ಅಪಹರಿಸಿದೆ ಎಂದು ಹೇಳಲಾಗಿದೆ. ಮ್ಯಾಕ್ಮಹೋನ್ ರೇಖೆ ಬಳಿಯ ಸೇರಾ–7 ಪ್ರದೇಶದ ನಾಚೊ ಸರ್ಕಲ್ ಬಳಿಯಿಂದ ತನ್ನ ಸಹೋದರ ಪ್ರಸಾದ್ನನ್ನು ಚೀನಾ ಅಪಹರಿಸಿದೆ ಎಂದು ಆತನ ಸಹೋದರ ಪ್ರಕಾಶ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆ ನಡೆದಿರುವ ಸೇರಾ –7 ಚೀನಾ ಗಡಿಗೆ ಕೆಲವೇ ಕಿ.ಮೀ ದೂರದಲ್ಲಿದೆ.
ಮಾಜಿ ಸಂಸದ ಮತ್ತು ಪಾಸಿಘಾಟ್ ಶಾಸಕ ನಿನಾಂಗ್ ಎರಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅರುಣಾಚಲ ಪ್ರದೇಶ ಪೊಲೀಸ್ ಇಲಾಖೆಯು ರಕ್ಷಣಾ ಇಲಾಖೆಯ ನೆರವು ಕೋರಿದೆ.
ಈ ಬೆಳವಣಿಗೆಯ ನಂತರ ರಾಜ್ಯದಲ್ಲಿ ಆತಂಕ ಮನೆಮಾಡಿದೆ. ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದ ಪೋಸ್ಟ್ ಹೊರತುಪಡಿಸಿದರೆ ಅಧಿಕೃತವಾಗಿ ದೂರು ದಾಖಲಾಗಿಲ್ಲ. ಮಾಹಿತಿ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ಎಂದು ಜಿಲ್ಲಾಡಳಿತ ಹೇಳಿದೆ.
ಚೀನಾ ಗಡಿ ಪ್ರವೇಶಿಸಿದ ಆರೋಪದ ಮೇಲೆ ಇದೇ ಮಾರ್ಚ್ನಲ್ಲಿ ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಟೋಗ್ಲೆ ಸಿಂಕಾಮ ಎಂಬ ಸ್ಥಳೀಯ ಯುವಕನನ್ನು ವಶಕ್ಕೆ ಪಡೆದಿತ್ತು. ಭಾರತೀಯ ಸೇನೆಯ ಮಧ್ಯ ಪ್ರವೇಶದ ನಂತರ 19 ದಿನಗಳ ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು. ಗಡಿ ಪ್ರವೇಶ ಆರೋಪದ ಮೇಲೆ ಸ್ಥಳೀಯರನ್ನು ವಶಕ್ಕೆ ಪಡೆಯುತ್ತಿರುವುದು ಹೊಸದೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಅನೇಕ ಸ್ಥಳೀಯರನ್ನು ಅದು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.