ಬೆಂಗಳೂರು: ಜೆಡಿಎಸ್ ಮುಖಂಡ, ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರನ್ನು ಮಂಗಳವಾರ ಭೇಟಿ ಮಾಡಿದ ಆಮ್ ಆದ್ಮಿ ಪಕ್ಷದ (ಆಪ್) ರಾಜ್ಯ ಉಸ್ತುವಾರಿ ರೋಮಿ ಭಾಟಿ ನೇತೃತ್ವದ ನಿಯೋಗ, ಪಕ್ಷ ಸೇರುವಂತೆ ಆಹ್ವಾನ ನೀಡಿದೆ.
ರೋಮಿ ಭಾಟಿ, ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮತ್ತು ರಾಜ್ಯ ಘಟಕದ ಕಾರ್ಯದರ್ಶಿ ಸಂಚಿತ್ ಸಹಾನಿ ಅವರಿದ್ದ ನಿಯೋಗ ದತ್ತ ಅವರ ಮನೆಗೆ ಭೇಟಿ ನೀಡಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆಯ ನೇತೃತ್ವ ವಹಿಸಿಕೊಳ್ಳುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನೀಡಿರುವ ಸಂದೇಶವನ್ನು ದತ್ತ ಅವರಿಗೆ ತಿಳಿಸಿದೆ.
ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ದತ್ತ, ‘ಆಪ್ ಸೇರುವಂತೆ ಆಹ್ವಾನ ನೀಡಿದರು. ಆದರೆ, ನಾನು ಅದನ್ನು ನಿರಾಕರಿಸಿದ್ದೇನೆ. ಜೆಡಿಎಸ್ನಲ್ಲಿ ಗುರುತಿಸಿಕೊಂಡಿರುವ ನಾನು ನಮ್ಮ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ತೊರೆದು ಬರಲಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ’ ಎಂದರು.
‘ಕೆಲವು ವಿಚಾರಗಳಲ್ಲಿ ಜೆಡಿಎಸ್ ಮತ್ತು ಆಪ್ ಸಮಾನ ಕಾರ್ಯಸೂಚಿ ಹೊಂದಿವೆ. ಆ ರೀತಿಯ ವಿಚಾರಗಳಲ್ಲಿ ಆಪ್ ಜೊತೆ ನಿಲ್ಲಲು ನನಗೆ ಯಾವುದೇ ಅಡ್ಡಿಗಳೂ ಇಲ್ಲ ಎಂಬುದನ್ನೂ ತಿಳಿಸಿರುವೆ’ ಎಂದು ಹೇಳಿದರು.