ಬಾಗಲಕೋಟೆ: ‘ನೆರೆ ರಾಜ್ಯಗಳ ಜೊತೆಗಿನ ಜಲ ವಿವಾದಗಳಲ್ಲಿ ರಾಜ್ಯದ ವಾದಸಮರ್ಪಕವಾಗಿ ಮಂಡಿಸಲು ಆಗುವಂತೆ ಕಾನೂನು ತಂಡವನ್ನು ಬಲಪಡಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ವಿವಾದಗಳು ಹಲವು ನ್ಯಾಯಮಂಡಳಿಗಳ ಮುಂದಿವೆ. ಕೆಲವು ನ್ಯಾಯಾಲಯದಲ್ಲಿವೆ.ರಾಜ್ಯಕ್ಕೆ ಹಂಚಿಕೆಯಾದ ನೀರಿನ ಸದ್ಬಳಕೆಗೆ ಕ್ರಿಯಾಯೋಜನೆ ರೂಪಿಸಲು ತಜ್ಞರು, ಕಾನೂನು ಪಂಡಿತರನ್ನು ಒಳಗೊಂಡ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದರು.
‘ರಾಜ್ಯ ಪಾಲಿಗೆ ಹಂಚಿಕೆಯಾಗಿರುವುದು ಮಾತ್ರವಲ್ಲ, ಹೆಚ್ಚುವರಿಯಾಗಿ ಪಡೆದುಕೊಳ್ಳಲು ಎಲ್ಲೆಲ್ಲಿ ಅವಕಾಶಗಳಿವೆ ಎಂಬುದನ್ನು ಅಧ್ಯಯನ ಮಾಡಿ ಕಾನೂನಾತ್ಮಕ ಹೋರಾಟದ ಮೂಲಕ ನ್ಯಾಯ ಪಡೆಯಲಾಗುವುದು’ ಎಂದು ಹೇಳಿದರು.
‘ನಮ್ಮ ನೀರು ಬಳಕೆಗೆ ಯಾರ ಅಪ್ಪಣೆಯೂ ಬೇಕಿಲ್ಲ. ಕಾನೂನಾತ್ಮಕಾಗಿಯೇ ಮೇಕೆದಾಟು ಯೋಜನೆಯನ್ನು ಕುಡಿಯುವ ನೀರು ಪೂರೈಕೆ, ವಿದ್ಯುತ್ ಉತ್ಪಾದನೆಗೆ ಮಾಡಿಯೇ ತೀರುತ್ತೇವೆ. ತಮಿಳುನಾಡಿನ ಅಣ್ಣಾಮಲೈ ಅವರ ಹೋರಾಟ ಅರ್ಥಹೀನ’ ಎಂದರು.
ವಾಲ್ಮೀಕಿ ಸಮಾಜದ ಇನ್ನಿಬ್ಬರಿಗೆ ಸಚಿವ ಸ್ಥಾನ: ಸ್ವಾಮೀಜಿ ಬೇಡಿಕೆ
ಚಿಕ್ಕಬಳ್ಳಾಪುರ: ‘ವಾಲ್ಮೀಕಿ ನಾಯಕರು ರಾಜ್ಯದ ನಾಲ್ಕನೇ ದೊಡ್ಡ ಸಮುದಾಯ. ಸಚಿವ ಸಂಪುಟದಲ್ಲಿ ಸಮುದಾಯದ ಒಬ್ಬರಿಗಷ್ಟೇ ಅವಕಾಶ ನೀಡಲಾಗಿದೆ. ಜನಸಂಖ್ಯೆ ಆಧಾರದಲ್ಲಿ ಇನ್ನೂ ಇಬ್ಬರಿಗೆ ಅವಕಾಶ ನೀಡಬೇಕು’ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ.
ಭಾನುವಾರ ಮಾತನಾಡಿದ ಅವರು, ‘ಈ ಬಗ್ಗೆ ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸುತ್ತೇವೆ. ’ಯಡಿಯೂರಪ್ಪ ಅವರನ್ನೇ ಸಿ.ಎಂ ಸ್ಥಾನದಲ್ಲಿ ಮುಂದುವರಿಸಲು ವೀರಶೈವ ಲಿಂಗಾಯತರು ಆಗ್ರಹಿಸಿದರು. ನಮ್ಮ ದೇಶವನ್ನು ಜಾತ್ಯತೀತ ಎನ್ನಬಹುದು. ಆದರೆ ಇಲ್ಲಿ ಜಾತಿಯೇ ಸತ್ಯ. ಇದನ್ನು ಸಮುದಾಯ ಅರ್ಥ ಮಾಡಿಕೊಳ್ಳಬೇಕು‘ ಎಂದರು.
ವಾಲ್ಮೀಕಿ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ನೀಡುವ ಬಗ್ಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ನನ್ನ ಮೇಲೆ ನಂಬಿಕೆ ಇಡಿ ಎಂದಿದ್ದರು. ಈಗ ಮಾಜಿಯಾಗಿ ಮೊಮ್ಮಕ್ಕಳ ಆಡಿಸುತ್ತಿದ್ದಾರೆ. ಒಟ್ಟಾರೆ, ನಮ್ಮನ್ನು ಮತಬ್ಯಾಂಕ್ ಮಾಡಿಟ್ಟುಕೊಳ್ಳುತ್ತಿದ್ದಾರೆ ಎನ್ನುವುದನ್ನು ಸಮುದಾಯ ಅರ್ಥ ಮಾಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.