ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಇಪಿ’ ಜಾರಿಗೆ ಶಾ ಮೆಚ್ಚುಗೆ: ಬೊಮ್ಮಾಯಿ ಸರ್ಕಾರದ ನಡೆಗೆ ಶಹಬ್ಬಾಸ್‌

Last Updated 3 ಮೇ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಇಡೀ ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ (ಎನ್ಇಪಿ) ಜಾರಿಗೆ ತಂದಿರುವ ಕರ್ನಾಟಕದ ನಡೆ ಶ್ಲಾಘನೀಯ. ಇತರೆಲ್ಲ ರಾಜ್ಯಗಳಿಗೆ ಇದೊಂದು ಮಾದರಿ’ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಬಣ್ಣಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ರಾಜ್ಯದಲ್ಲಿ ಸ್ಥಾಪಿಸಿರುವ ‘ನೃಪತುಂಗ ಏಕೀಕೃತ ವಿಶ್ವವಿದ್ಯಾಲಯ’ವನ್ನು ಮಂಗಳವಾರ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ನೀತಿ ಪರಿಚಯಿಸುವ ಕ್ರಾಂತಿಕಾರಿ ಹೆಜ್ಜೆ ಇಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವನ್ನು ಕೊಂಡಾಡಿದರು.

‘ಭಾರತವನ್ನು ಸಶಕ್ತವಾಗಿ ಕಟ್ಟಿ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಾಪಿಸುವುದು ಮತ್ತು ಯುವಜನರಿಗೆ ಉಜ್ವಲ ಅವಕಾಶಗಳನ್ನು ಒದಗಿಸಬೇಕೆನ್ನುವುದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಕಲ್ಪ. ಈ ಕ್ರಾಂತಿಕಾರಕ ಬದಲಾವಣೆಗಳನ್ನು ತರಲೆಂದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಈ ನೀತಿಯ ಮೂಲಕ ಭಾರತವನ್ನು ಜ್ಞಾನಾಧರಿತ ‘ಸೂಪರ್ ಪವರ್’ ಮಾಡುವ ಉದ್ದೇಶವಿದೆ. ಆ ಹಾದಿಯಲ್ಲಿ ಕರ್ನಾಟಕ ಮೂಂಚೂಣಿಯಲ್ಲಿ ನಿಂತಿದೆ’ ಎಂದೂ ಹೊಗಳಿದರು.

‘ದೇಶದಲ್ಲಿ ಸಂಭವಿಸುತ್ತಿರುವ ಶೈಕ್ಷಣಿಕ ಕ್ರಾಂತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಮಹತ್ವದ ಸ್ಥಾನವಿದೆ’ ಎಂದರು.

ಒಂದು ದೇಶ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ವ್ಯಕ್ತಿಗಳ ಚಿಕ್ಕಚಿಕ್ಕ ಸಂಕಲ್ಪಗಳು ನಿರ್ಣಾಯಕ ಕೊಡುಗೆ ಕೊಡುತ್ತವೆ. ಈ ನಿಟ್ಟಿನಲ್ಲಿ, ದೇಶವನ್ನು ಪ್ರೀತಿಸುವಂಥ ಶಿಕ್ಷಣವನ್ನು ಎನ್ಇಪಿ ಅಡಿಯಲ್ಲಿ ಒದಗಿಸಲಾಗುವುದು. ಇದು ಸಂಪೂರ್ಣ ಭಾರತೀಯ ದೃಷ್ಟಿಕೋನವನ್ನು ಹೊಂದಿದೆ. ದೇಶದ ಪ್ರಗತಿ ದೃಷ್ಟಿಯಿಂದ ಮುಂದಿನ 25 ವರ್ಷ ಅತ್ಯಂತ ಮಹತ್ವದ್ದು. ಭಾರತವು ವಿಶ್ವಗುರು ಎನಿಸಿಕೊಳ್ಳುವುದು ನಿಶ್ಚಿತ’ ಎಂದು ಪ್ರತಿಪಾದಿಸಿದ ಶಾ, ‘ಎಂಟು ವರ್ಷಗಳಿಂದೀಚೆಗೆ ದೇಶದ ಗ್ರಾಮೀಣ ಭಾಗದಲ್ಲಿ 410 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜತೆಗೆ, ಜಮ್ಮು-ಕಾಶ್ಮೀರದ ಲಡಾಖ್ ಮತ್ತು ಈಶಾನ್ಯ ಭಾರತ ಸೇರಿದಂತೆ ಉದ್ದಗಲಕ್ಕೂ ಕೇಂದ್ರೀಯ ವಿಶ್ವವಿದ್ಯಾಲಯಗಳು, ಏಮ್ಸ್, ಐಐಟಿಗಳು, ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ಜ್ಞಾನಶಾಖೆಗಳ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ’ ಎಂದು ವಿವರಿಸಿದರು.

‘ಎನ್‌ಇಪಿಯಿಂದ ಸಮಗ್ರ ಪರಿವರ್ತನೆ: ಬೊಮ್ಮಾಯಿ

‘ಇದು ಪರಿವರ್ತನೆಯ ಪರ್ವಕಾಲ. ಜನಸಂಖ್ಯೆಯಲ್ಲಿ ಶೇ 46ರಷ್ಟಿರುವ ಯುವಜನರನ್ನು ದೇಶದ ಆಸ್ತಿಯೆಂದು ಭಾವಿಸಲಾಗಿದೆ. ಯುವಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಇವೇ ನಮ್ಮ ಸರ್ಕಾರದ ಮೂಲಮಂತ್ರ ಕ್ಯಾಂಪಸ್ ಸಂದರ್ಶನ, ಸ್ವ-ಉದ್ಯೋಗಕ್ಕೆ ಒತ್ತು ಕೊಡುವುದರ ಜತೆಗೆ ಪ್ರತೈಕ ಉದ್ಯೋಗ ನೀತಿಯನ್ನೇ ರಾಜ್ಯದಲ್ಲಿ ರೂಪಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನೃಪತುಂಗ ವಿ.ವಿ.ಗೆ ಕೇಂದ್ರ ಸರ್ಕಾರ ₹ 55 ಕೋಟಿ ಅನುದಾನ ಮಂಜೂರು ಮಾಡಿದೆ. ಇದಕ್ಕೆ ಅಗತ್ಯವಿರುವ ಬಾಕಿ ಹಣವನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಕಾಲದ ಜತೆಯಲ್ಲಿ ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗಲಿವೆ. ಹೀಗಾಗಿ, ರಾಜ್ಯದಲ್ಲಿ ಎನ್ಇಪಿ ಜಾರಿಗೊಳಿಸುತ್ತಿದ್ದು, ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಮಟ್ಟದವರೆಗೂ ಇನ್ನು ಮುಂದೆ ಸಮಗ್ರ ಪರಿವರ್ತನೆ ಕಾಣಿಸಿಕೊಳ್ಳಲಿದೆ. ನೃಪತುಂಗ ವಿಶ್ವವಿದ್ಯಾಲಯವು ಎನ್ಇಪಿ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಉನ್ನತ ಶಿಕ್ಷಣದಲ್ಲಿ ಎನ್ಇಪಿ ಅಳವಡಿಸಲು ಎರಡು ವರ್ಷಗಳಿಂದ ಎಡೆಬಿಡದೆ ಶ್ರಮಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶೀಘ್ರದಲ್ಲಿ ಇನ್ನೂ ಏಳು ವಿವಿ’

‘ನವಭಾರತ ನಿರ್ಮಾಣಕ್ಕಾಗಿ ನವಕರ್ನಾಟಕವು ತನ್ನ ಮೌಲಿಕ ಕೊಡುಗೆ ನೀಡಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

‘ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಆರು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಸದ್ಯದಲ್ಲೇ ಇನ್ನೂ ಏಳು ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬರಲಿವೆ. ಒಟ್ಟಿನಲ್ಲಿ ಒಂದು ಜಿಲ್ಲೆಗೆ ಒಂದು ವಿಶ್ವವಿದ್ಯಾಲಯವಾದರೂ ಇರುವಂತೆ ಮುಂದಡಿ ಇಡಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT