ಚಿಕ್ಕಮಗಳೂರು: ‘ನೀವು (ಬಿಜೆಪಿಯವರು) ಮತದಾನದ ಹಕ್ಕನ್ನೇ ಮಾರಾಟ ಮಾಡಲು ಹೊರಟವರು. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನು ಮೊದಲು ತೆಗೆದು ಹಾಕಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಮೂಡಿಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ಮೊದಲು ನಿಭಾಯಿಸಿಕೊಳ್ಳಿ’ ಎಂದು ಕುಟುಕಿದರು.
‘ಮತದಾರರ ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದೇವೆ. ಚುನಾವಣಾ ಆಯೋಗ, ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ. ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಅಮಾನತಾಗಿದ್ದಾರೆ. ಇನ್ನು ಕೆಲವು ವಿಚಾರಗಳು ಇವೆ, ಬೆಂಗಳೂರಿನಲ್ಲಿ ಅವುಗಳನ್ನು ತಿಳಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
‘ನನ್ನ ಮೇಲೆ ರೌಡಿಶೀಟ್ ಇಲ್ಲ. ಜೈಲಿಗೆ ಹೋಗಿಬಂದವರಲ್ಲಿ ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ, ಸಚಿವರ ಪೈಕಿ ಹಲವರು ಹಾಗೂ ನಾನೂ ಇದ್ದೇನೆ. ನನ್ನ ವಿರುದ್ಧ ಭಷ್ಟಾಚಾರ ಪ್ರಕರಣ, ವಿಚಾರಣೆ ಇರಲಿಲ್ಲ, ರಾಜಕೀಯ ಪ್ರೇರಿತವಾಗಿ ಜೈಲಿಗೆ ಹಾಕಿದ್ದರು’ ಎಂದು ಉತ್ತರಿಸಿದರು