ಸಿಂದಗಿ, ಹಾನಗಲ್ ಉಪಚುನಾವಣೆ: ಬಿಜೆಪಿಗೆ ಮಿಶ್ರ ಫಲಿತಾಂಶ ಎಂದ ಸಿ.ಟಿ.ರವಿ

ಚಿಕ್ಕಮಗಳೂರು: ‘ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿಗೆ ಮಿಶ್ರ ಫಲಿತಾಂಶ ಲಭಿಸಿದೆ. ಜನಾದೇಶವನ್ನು ಸ್ವೀಕಾರ ಮಾಡುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಫಲಿತಾಂಶವನ್ನು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವಿರುದ್ಧದ ಜನಾದೇಶ ಭಾವಿಸಿಲ್ಲ. ಹಾನಗಲ್ ಕ್ಷೇತ್ರದಲ್ಲಿ ಶ್ರೀನಿವಾಸ ಮಾನೆ ಅವರು ಈ ಹಿಂದೆ ಸೋತ ದಿನದಿಂದ ನಿರಂತರವಾಗಿ ಜನರ ಸಂಪರ್ಕದಲ್ಲಿ ಇದ್ದದ್ದು ಅವರ ಗೆಲುವಿಗೆ ಪೂರಕವಾಯಿತು. ನಾಮಪತ್ರ ಸಲ್ಲಿಕೆ ಕೊನೆಯ ದಿನದ ಹಿಂದಿನ ದಿನದವರೆಗೂ ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮ ಮಾಡದಿದ್ದುದು ಸೋಲಿಗೆ ಭಾಗಶಃ ಪರಿಣಾಮ ಬೀರಿದೆ. ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಸರ್ವ ಪ್ರಯತ್ನ ಮಾಡಿದ್ದೆವು’ ಎಂದು ವಿಶ್ಲೇಷಿಸಿದರು.
ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು
‘ಸಿಂದಗಿ ಕ್ಷೇತ್ರದಲ್ಲಿ 31 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ವಿರೋಚಿತ ಹೋರಾಟ ಮಾಡಿದ್ದೇವೆ’ ಎಂದು ಅವರು ಹೇಳಿದರು.
‘ಜನತೆಯ ತೀರ್ಪಿಗೆ ನಾವು ಇವಿಎಂ ದೂರಲ್ಲ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ ವಿಪಕ್ಷ ನಾಯಕರು ಇವಿಎಂ ದೂರುತ್ತಿದ್ದರು’ ಎಂದು ಕುಟುಕಿದರು.
ಓದಿ: ಸಿಂದಗಿ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರಗೆ ಭರ್ಜರಿ ಗೆಲುವು
‘ಒಂದು ಕಡೆ ಭರ್ಜರಿ ಗೆಲುವು ಸಿಕ್ಕಿದೆ. ಮತ್ತೊಂದು ಕಡೆ ಗೆಲ್ಲಲು ಆಗಿಲ್ಲ. ತಪ್ಪುಗಳು ಆಗಿದ್ದರೆ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ. ತಪ್ಪುಸರಿಪಡಿಸಿಕೊಳ್ಳುವಿಕೆ ನಿರಂತರ ಪ್ರಕ್ರಿಯೆ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.