ದಾವಣಗೆರೆ: ವಿಜಯ ಸಂಕಲ್ಪ ಯಾತ್ರೆ’ಯ ಸಮಾರೋಪದ ಅಂಗವಾಗಿ ಬಿಜೆಪಿಯು ಮಧ್ಯ ಕರ್ನಾಟಕದ ದಾವಣಗೆರೆ ಯಲ್ಲಿ ಶನಿವಾರ ಆಯೋಜಿಸಿದ್ದ ‘ಮಹಾಸಂಗಮ’ ಕಾರ್ಯಕ್ರಮ ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಒದಗಿಸಿತು.
ದಕ್ಷಿಣ ರಾಜ್ಯದಲ್ಲಿನ ತನ್ನ ಏಕೈಕ ಅಧಿಕಾರ ಕೇಂದ್ರವನ್ನು ಬಿಟ್ಟುಕೊಡಕೂಡದು ಎಂಬ ಉದ್ದೇಶದೊಂದಿಗೆ ತಿಂಗಳುಗಳ ಹಿಂದೆಯೇ ಯಾತ್ರೆಗಳ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರ ಆರಂಭಿಸಿರುವ ಪಕ್ಷಕ್ಕೆ, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲವೇ ಆಸರೆ’ ಎಂಬುದನ್ನು ಇಲ್ಲಿ ನೆರೆದಿದ್ದ ಲಕ್ಷಾಂತರ ಜನರ ಕರತಾಡನ ಮತ್ತೆ ಸಾಬೀತುಪಡಿಸಿತು.
ಕಾರ್ಯಕ್ರಮಕ್ಕೆ ಸಿದ್ಧಗೊಂಡಿದ್ದ ಪೆಂಡಾಲ್ ನಡುವೆ ಇದೇ ಮೊದಲ ಬಾರಿಗೆ ತೆರೆದ ವಾಹನದಲ್ಲಿ ಜನರ ಮಧ್ಯೆ ಭವ್ಯ ‘ಮೆರವಣಿಗೆ’ ಮೂಲಕ ಸಾಗಿದ ಮೋದಿ, ಹೂಮಳೆ ಮೂಲಕ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಕಂಡು ಪುಳಕಿತರಾದರು.
ಉರಿ ಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದ ಲಕ್ಷಾಂತರ ಕಾರ್ಯಕರ್ತರ ಪ್ರತಿಕ್ರಿಯೆ ಕೋರಿದ ಪ್ರಧಾನಿ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ತಮ್ಮ ಭಾಷಣದ ಬಹುತೇಕ ಸಮಯವನ್ನು ಕಾಂಗ್ರೆಸ್ ವಿರುದ್ಧದ ಟೀಕೆಗೆ ಮೀಸಲಿರಿಸಿದ ಅವರು, ‘ಅವಕಾಶವಾದಿ, ಸ್ವಾರ್ಥ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕರ್ನಾಟಕಕ್ಕೆ ಅನುಕೂಲ ಮಾಡಿದ್ದಕ್ಕಿಂತ ನಷ್ಟ ಉಂಟು ಮಾಡಿದ್ದೇ ಹೆಚ್ಚು’ ಎಂದು ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.